ಶಿವಮೊಗ್ಗ : ಸಾಲದ ಹಣ ಮರುಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಜೀವನಾಧಾರವಾಗಿದ್ದ ಆಟೋವನ್ನೇ ಬಲವಂತವಾಗಿ ಜಪ್ತಿ ಮಾಡಿದ ಘಟನೆಯಿಂದ ಮನನೊಂದು, ಆಟೋ ಚಾಲಕರೊಬ್ಬರು ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮಂಜುನಾಥ್ (35) ಸಾಲದ ಬಾಧೆಗೆ ಬಲಿಯಾದ ದುರ್ದೈವಿ ಆಟೋ ಚಾಲಕ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಮಂಜುನಾಥ್ ಅವರು, ತಮ್ಮ ಪ್ಯಾಸೆಂಜರ್ ಆಟೋಗಾಗಿ ಸುಮಾರು 30 ಸಾವಿರ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸರಿಯಾಗಿ ನಡೆಯದ ಕಾರಣ ಅಥವಾ ಹಣಕಾಸಿನ ತೊಂದರೆಯಿಂದಾಗಿ ಅವರಿಗೆ ಆ ಸಾಲದ ಹಣವನ್ನು ಸಕಾಲದಲ್ಲಿ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಇದೇ ವಿಷಯವಾಗಿ ಸಾಲ ಕೊಟ್ಟವರು ಮಂಜುನಾಥ್ ಅವರ ಆಟೋವನ್ನು ಬಲವಂತವಾಗಿ ಜಪ್ತಿ ಮಾಡಿ ತಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಇಡೀ ಕುಟುಂಬದ ಜೀವನೋಪಾಯಕ್ಕೆ ಮುಖ್ಯ ಆಧಾರವಾಗಿದ್ದ ಆಟೋವೇ ಕೈತಪ್ಪಿ ಹೋದದ್ದರಿಂದ ಮಂಜುನಾಥ್ ತೀವ್ರವಾಗಿ ಕಂಗಾಲಾಗಿದ್ದರು. ಮುಂದಿನ ಬದುಕಿನ ದಾರಿ ಕಾಣದೆ ತೀವ್ರ ಮಾನಸಿಕ ಒತ್ತಡ ಹಾಗೂ ಅವಮಾನಕ್ಕೆ ಒಳಗಾಗಿದ್ದ ಅವರು, ಇದೇ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಈ ದಾರುಣ ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡಿದವರ ವಿರುದ್ಧ ತನಿಖೆಯನ್ನು ಆರಂಭಿಸಿದ್ದಾರೆ.