ಮಡಿಕೇರಿ: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಯೊಂದು ಬಿದ್ದು ಜೋಯ್ಸಿ (33) ಎಂಬ ಮಹಿಳೆ ಅಸುನೀಗಿದ್ದಾರೆ. ಇವರ ಪತಿ ಮತ್ತು ಮಗು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ತಮಿಳುನಾಡಿನಿಂದ ಇವರು ಪ್ರವಾಸಕ್ಕಾಗಿ ಬಂದಿದ್ದರು. ಸಾಕಾನೆಗಳಿಗೆ ಸ್ನಾನ ಮಾಡಿಸುವಾಗ ಎರಡು ಸಾಕಾನೆಗಳ ನಡುವೆ ಕಾದಾಟ ಉಂಟಾಗಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಮನಕಲಕುವಂತಿದೆ.
ಆನೆಗಳಿಗೆ ಸ್ನಾನ ಮಾಡಿಸುವಾಗ ಅವುಗಳಿಗೆ ಪ್ರವಾಸಿಗರು ಆಹಾರ ಕೊಡುತ್ತಾರೆ. ಇದು ಖುಷಿ ಕೊಡುವ ವಿಷಯವೂ ಹೌದು. ಇದೇ ರೀತಿ ಚೆನ್ನೈನಿಂದ ಬಂದಿದ್ದ ಈ ಮಹಿಳೆ ಆನೆಗಳಿಗೆ ಆಹಾರ ಕೊಡುವುದಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಪಳಗಿಸಿದ್ದ 2 ಆನೆಗಳು ಏಕಾಏಕಿ ಕಾದಾಟ ಆರಂಭಿಸಿವೆ.
ಒಂದು ಆನೆ ಮತ್ತೊಂದು ಆನೆ ಮೇಲೆ ದಾಳಿ ಮಾಡಲು ಆರಂಭಿಸಿದಾಗ, ಅಲ್ಲಿಯೇ ಇದ್ದ ಪ್ರವಾಸಿಗರು ಭಯಪಟ್ಟು ಓಡಿದ್ದಾರೆ. ಜೋಯ್ಸಿ ಅವರೂ ಓಡುವಾಗ ಸಮತೋಲನ ಕಳೆದುಕೊಂಡು ನೀರಿಗೆ ಬಿದ್ದಿದ್ದಾರೆ. ಆದರೆ ಆಕೆಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸ್ಥಳೀಯರು ತಕ್ಷಣ ನೀರಿಗೆ ಇಳಿದು ಅವರನ್ನು ಹೊರತಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಬದುಕುಳಿಯಲಿಲ್ಲ. ಈ ಘಟನೆ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂತರ ಕಾಯ್ದುಕೊಳ್ಳಲು ಸೂಚನೆ:
ಪ್ರವಾಸಿಗರಿಗೆ ಆನೆ ಮೈ ತೊಳೆಯಲು ಅವಕಾಶ ನೀಡುವುದು, ಅವರಿಂದ ಬೆಲ್ಲ, ಬಾಳೆಹಣ್ಣು ಇತ್ಯಾದಿ ಆಹಾರ ತಿನ್ನಿಸುವುದನ್ನು ನಿರ್ಬಂಧಿಸಲು ಕ್ರಮ ವಹಿಸುವಂತೆ ಮತ್ತು ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.