ಹೊಸದಿಲ್ಲಿ: 'ವಂದೇ ಮಾತರಂ' ಗೀತೆ ಹಾಡುವುದು ಇನ್ನು ಮುಂದೆ ಕಡ್ಡಾಯ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಮಾರ್ಗಸೂಚಿಗಳ ಅನ್ವಯ "ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ಜನ ಗಣ ಮನ ಹಾಡುವ ಅಥವಾ ನುಡಿಸುವ ಮೊದಲು ವಂದೇ ಮಾತರಂ ಗೀತೆಯನ್ನು ಹಾಡಬೇಕು ಇಲ್ಲವೇ ನುಡಿಸಬೇಕು. ಆಗ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು ಎಂದು ಹೇಳಲಾಗಿದೆ.
1937ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ ನಾಲ್ಕು ಚರಣಗಳನ್ನು ಒಳಗೊಂಡಂತೆ, ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ನುಡಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ ಚಿತ್ರಮಂದಿರಗಳಲ್ಲಿ ಈ ಗೀತೆಯನ್ನು ನುಡಿಸುವುದು ಕಡ್ಡಾಯ ಅಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಪ್ರಯುಕ್ತ ಗೌರವ ಸಲ್ಲಿಸಲು ಈ ನಿರ್ಧಾರ ತೆಗೆದುಕೊಂಡಿದೆ. 3 ನಿಮಿಷ 10 ಸೆಕೆಂಡುಗಳ ಅವಧಿಯಲ್ಲಿ ಹಾಡಬೇಕು ಇಲ್ಲವೇ ನುಡಿಸಬೇಕಾಗಿರುತ್ತದೆ.
ಇದುವರೆಗೂ ವಂದೇ ಮಾತರಂ ಗೀತೆಯನ್ನು ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳು ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅವರ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ನುಡಿಸಲಾಗುತ್ತಿತ್ತು.
ವಂದೇ ಮಾತರಂ ಗೀತೆಯ 6 ಚರಣಗಳ ಗೀತೆ ನುಡಿಸುವಾಗ ಅಥವಾ ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.