2026-07-03 01:02:00

TVK | ಟಿವಿಕೆ ಸರ್ಕಾರ ಪತನಕ್ಕೆ ಶಾಸಕರ ಖರೀದಿ, ₹35 ಕೋಟಿ ಆಮಿಷ: ಪೊಲೀಸರ ಆರೋಪ | SNK

TVK | ಟಿವಿಕೆ ಸರ್ಕಾರ ಪತನಕ್ಕೆ ಶಾಸಕರ ಖರೀದಿ, ₹35 ಕೋಟಿ ಆಮಿಷ: ಪೊಲೀಸರ ಆರೋಪ | SNK

ಚೆನ್ನೈ: ಡಿಎಂಕೆಯ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರು, ಆಡಳಿತಾರೂಢ ಟಿವಿಕೆ ಶಾಸಕರೊಬ್ಬರಿಗೆ ತಮ್ಮ ಸಹಚರರ ಮೂಲಕ ₹35 ಕೋಟಿ ಆಮಿಷ ಒಡ್ಡಿದ್ದು, ವಿರೋಧ ಪಕ್ಷವು ವಿಧಾನಸಭೆ ಸ್ಪೀಕರ್‌ ವಿರುದ್ಧ ಮಂಡಿಸಲು ಯೋಜಿಸುತ್ತಿರುವ ಅವಿಶ್ವಾಸ ನಿರ್ಣಯ ಬೆಂಬಲಿಸಿ ಮತ ಚಲಾಯಿಸುವಂತೆ ಒತ್ತಡ ಹೇರಿದ್ದಾರೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ. ಉತ್ತಂಗರೈ ಶಾಸಕ ಎನ್‌. ಇಳಯರಾಜ ಅವರ ದೂರಿನ ಆಧಾರದ ಮೇಲೆ ಪೊಲೀಸರು ರಾಜಕೀಯ ಕಾರ್ಯತಂತ್ರ ನಿಪುಣರಾದ ತಿರುಚ್ಚಿಯ ತಿರುನಾವುಕ್ಕರಸು, ನರೇಶ್‌ ಮತ್ತು ಚೆನ್ನೈನ ಮೇದವಕ್ಕಂನ ತ್ಯಾಗರಾಜನ್‌ ಎಂಬವರನ್ನು ಬಂಧಿಸಿದ್ದಾರೆ. ತಿರುನಾವುಕ್ಕರಸು ಅವರು ಇಳಯರಾಜ ಅವರನ್ನು ಸಂಪರ್ಕಿಸಿ, ಸೆಂಥಿಲ್‌ ಬಾಲಾಜಿ ಮತ್ತು ಅವರ ಸಹೋದರ ವಿ. ಅಶೋಕ್‌ ಕುಮಾರ್‌ ಅವರ ಸಲಹೆಯ ಮೇರೆಗೆ ಹಣ ನೀಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಬಂಧಿತ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಾಜಿ ಹೆಸರು ಕೇಳಿಬಂದಿದೆ. ಸ್ಪೀಕರ್ ಅವರನ್ನು ಪದಚ್ಯುತಗೊಳಿಸಲು ಮತ್ತು ಟಿವಿಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಶಾಸಕರೊಬ್ಬರಿಗೆ ಲಂಚ ನೀಡಲು ಪ್ರಯತ್ನಿಸಿದ ಗಂಭೀರ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಹಿಂದಿನ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ನಡೆದ 'ಉದ್ಯೋಗಕ್ಕಾಗಿ ಹಣ' ಹಗರಣದಲ್ಲೂ ಸೆಂಥಿಲ್‌ ಬಾಲಾಜಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು.

ಎಐಎಡಿಎಂಕೆ- ಭಿನ್ನಮತ ಉಲ್ಬಣ: ಎಐಎಡಿಎಂಕೆಯೊಳಗಿನ ಭಿನ್ನಮತ ಬುಧವಾರ ತೀವ್ರಗೊಂಡಿದ್ದು, ಕೊಯಮತ್ತೂರಿನ ಪ್ರಭಾವಿ ಮುಖಂಡ ಎಸ್‌.ಪಿ ವೇಲುಮಣಿ ಸೇರಿ, ಒಂಬತ್ತು ಬಂಡಾಯ ನಾಯಕರು ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಮುಂದಿಟ್ಟ ಹೊಸ ಹುದ್ದೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಬುಧವಾರ ಪಳನಿಸ್ವಾಮಿ ಕರೆದಿದ್ದ ಸಭೆಯಿಂದ ದೂರ ಉಳಿದ ಈ ಮುಖಂಡರು, 'ಟಿವಿಕೆಗೆ ಎಐಎಡಿಎಂಕೆ ಕಾರ್ಯಕರ್ತರು ಮತ್ತು ಮುಖಂಡರ ಸಾಮೂಹಿಕ ವಲಸೆಗೆ ಪಳನಿಸ್ವಾಮಿ ಅವರೇ ಕಾರಣ' ಎಂದು ಆರೋಪಿಸಿದ್ದಾರೆ.

ಮಾಜಿ ಸಚಿವರಾದ ಸಿ. ವಿಜಯಭಾಸ್ಕರ್ ಮತ್ತು ಎಂ.ಆರ್. ವಿಜಯಭಾಸ್ಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಡಳಿತಾರೂಢ ಟಿವಿಕೆ ಸೇರಲು ಸಿದ್ಧರಾಗಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಎಐಎಡಿಎಂಕೆಯ ಮಾಜಿ ಸಚಿವರು, ಶಾಸಕರು ಟಿವಿಕೆ ಸೇರಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ವೇಲುಮಣಿ ಸೇರಿದಂತೆ ಕೆಲವು ನಾಯಕರು 'ಗೌರವಯುತ ಸ್ಥಾನ' ಲಭಿಸಿದರೆ ಟಿವಿಕೆ ಸೇರುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿ.ಎಂ. ವಿರುದ್ಧ ಡಿಎಂಕೆ ದೂರು

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಡಿಎಂಕೆಯ ಇಬ್ಬರು ಶಾಸಕರನ್ನು ಖರೀದಿಸಲು ಮುಂದಾಗಿದ್ದಾರೆ ಎಂದು ಎಂಡಿಎಂಕೆ ಮುಖ್ಯಸ್ಥ ವೈಕೊ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದು, ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಗುಪ್ತಚರ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ(ಡಿವಿಎಸಿ) ನಿರ್ದೇಶನ ನೀಡಬೇಕು ಎಂದು ಡಿಎಂಕೆ ರಾಜ್ಯಪಾಲರಿಗೆ ಬುಧವಾರ ದೂರು ನೀಡಿದೆ.

'ಶಾಸಕರ ಖರೀದಿಗೆ ಸಂಬಂಧಿಸಿ ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯಪಾಲ ಆರ್‌.ವಿ ಅರ್ಲೇಕರ್‌ ಅವರು ನಿರ್ದೇಶನ ನೀಡಬೇಕು. ವೈಕೊ ಮತ್ತು ಮುಖ್ಯಮಂತ್ರಿ ವಿಜಯ್‌ ನಡುವೆ ನಡೆದಿರುವ ಅಪರಾಧ ಸಂಚಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯವನ್ನು ಖಚಿತಪಡಿಸಬೇಕು' ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌.ಎಸ್‌. ಭಾರತಿ ಆಗ್ರಹಿಸಿದ್ದಾರೆ. ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟದಿಂದ (ಎಸ್‌ಪಿಎ) ಎಂಡಿಎಂಕೆ ಹೊರಬಂದು, ಆಡಳಿತಾರೂಢ ಟಿವಿಕೆಯನ್ನು ಬೆಂಬಲಿಸಲು ನಿರ್ಧರಿಸಿದ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ. ಡಿಎಂಕೆ ಆರೋಪವನ್ನು ಅಲ್ಲಗಳೆದಿರುವ ಟಿವಿಕೆ, 'ಮುಖ್ಯಮಂತ್ರಿ ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ' ಎಂದು ಹೇಳಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.