ಚಿತ್ರರಂಗದಲ್ಲಿ ನಾಯಕಿಯರಿಗೆ ಆಯಸ್ಸು ಕಡಿಮೆ ಎನ್ನುವ ಮಾತು ಇದೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು. ಹೀಗಾಗಿಯೇ ಹಲವರು ತಮ್ಮ ಬೆಲೆ ಕಡಿಮೆಯಾಗುವ ಮೊದಲು ತಮ್ಮಲ್ಲಿನ ಕಲೆಗೆ ಬೆಲೆ ಸಿಗಲಿ ಎಂದು ಆಶಿಸುತ್ತಾರೆ. ಮದುವೆ-ಗಂಡ ಎಂದು ಸಾಂಸಾರಿಕ ಪ್ರಪಂಚದಲ್ಲಿ ಕಳೆದು ಹೋಗುವ ಮುನ್ನ ತಮ್ಮ ಕೆಲಸದ ಮೂಲಕ ಛಾಪು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಸೂಪರ್ ಸ್ಟಾರ್ ಗಳ ಜೊತೆ ತೆರೆಹಂಚಿಕೊಳ್ಳಬೇಕೆಂದು ಪ್ರಯತ್ನ ಮಾಡುತ್ತಾರೆ.
ಆದರೆ ಈ ಪ್ರಯತ್ನದಲ್ಲಿ ಎಲ್ಲರೂ ಗೆಲ್ಲಲ್ಲ. ಸೂಪರ್ ಸ್ಟಾರ್ ಗೆ ನಾಯಕಿಯಾದ ಮಾತ್ರಕ್ಕೆ ನಸೀಬು ಬದಲಾಗಲ್ಲ. ಮತ್ತೂ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಸೂಪರ್ ಸ್ಟಾರ್ ಗಳ ಜೊತೆ ಕೆಲಸ ಮಾಡುವ ಭಾಗ್ಯ ಇವರಿಗೆ ಸಿಗುವುದೇ ಇಲ್ಲ. ಉದಾಹರಣೆಗೆ ತಾಪ್ಪಿ ಪನ್ನು. ಹೌದು, ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂರುವ ತಾರೆಯರೇ ಹೆಚ್ಚು. ಆದರೆ ತಾಪ್ಪಿ ಪನ್ನು ಇದಕ್ಕೆ ತದ್ವಿರುದ್ಧ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಛಾತಿಯನ್ನು ಹೊಂದಿರುವವರು ತಾಪ್ಪಿ ಪನ್ನು.
ಇಂಥಾ ತಾಪ್ಪಿ ಪನ್ನುಗೆ ಹಿಂದೊಮ್ಮೆ ಬದುಕಿಗೆ ದಕ್ಷಿಣ ಭಾರತೀಯ ಚಿತ್ರಗಳೇ ಆಸರೆಯಾಗಿದ್ದವು. ಆದರೆ ಈಗ ತಾಪ್ಪಿಗೆ ತಮ್ಮ ಬದುಕಿಗೆ ಭದ್ರ ಬುನಾದಿ ಹಾಕಿದ ಸೌತ್ ಸಿನಿಮಾಗಳ ಬಗ್ಗೆ ತಾತ್ಸಾರ ಇದೆ. ಹಲವು ಆರೋಪಗಳನ್ನು ತಾಪ್ಪಿ ಕಾಲ ಕಾಲಕ್ಕೆ ದಕ್ಷಿಣ ಚಿತ್ರರಂಗದ ವಿರುದ್ಧ ಆರೋಪ ಮಾಡುತ್ತಲೇ ಬಂದಿದ್ದಾರೆ. ಇರಲಿ, ಸದ್ಯದ ವಿಚಾರ ಏನೆಂದರೆ, ತಾಪ್ಪಿ ಪನ್ನು ಬಾಲಿವುಡ್ನಲ್ಲಿ ತಮಗ್ಯಾಕೇ ಸ್ಟಾರ್ ಗಳ ಚಿತ್ರದಲ್ಲಿ ಕೆಲಸ ಸಿಗಲ್ಲ ಎಂದು ಹೇಳಿದ್ದಾರೆ. ಬಾಲಿವುಡ್ನಲ್ಲಿ ಅವಕಾಶಗಳಿಂದ ವಂಚಿತರಾಗಲು ಕಾರಣವೇನು ಎಂದು ಹೇಳಿದ್ದಾರೆ.
ಈ ಕುರಿತು ''ಹಿಂದೂಸ್ತಾನ್ ಟೈಮ್ಸ್"ನ ಸೋನಲ್ ಕಾಳ್ತಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತಾಪ್ಪಿ ಪನ್ನು ಕೆಲ ಒಮ್ಮೆ ತಮ್ಮ ಚಿತ್ರಕ್ಕೆ ಯಾರು ನಾಯಕಿಯಾಗಬೇಕು ಎನ್ನುವ ನಿರ್ಧಾರವನ್ನು ಚಿತ್ರದ ನಿರ್ದೇಶಕರೇ ಮಾಡುತ್ತಾರೆ, ಆದರೆ, ಬಹುತೇಕ ಬಾರಿ ಈ ನಿರ್ಧಾರವನ್ನು ಆ ಚಿತ್ರದ ಸ್ಟಾರ್ ಮಾಡ್ತಾರೆ ಎಂದು ಹೇಳಿದ್ದಾರೆ.
ಮುಂದುವರೆದು ಉದಾಹರಣೆಯನ್ನು ಕೂಡ ನೀಡಿರುವ ತಾಪ್ಪಿ ಪನ್ನು, "ಡಂಕಿ" ಚಿತ್ರದಲ್ಲಿ ನಾನು ಶಾರುಖ್ ಖಾನ್ ಅವರಿಗೆ ಜೋಡಿಯಾದಾಗ ಹಲವರು ಆಘಾತಕ್ಕೆ ಒಳಗಾಗಿದ್ದರು ಎಂದಿದ್ದಾರೆ. ಆದರೆ, ಆ ಸಮಯದಲ್ಲಿ ನನ್ನನ್ನೂ ಚಿತ್ರಕ್ಕೆ ಆಯ್ಕೆ ಮಾಡಿದ್ದು ಬೇರೆ ಯಾರು ಅಲ್ಲ ಬದಲಿಗೆ ರಾಜು ಸರ್ (ರಾಜ್ಕುಮಾರ್ ಹಿರಾನಿ ) ಹೀಗಾಗಿ ಆ ಚಿತ್ರದಲ್ಲಿ ನಾನು ಕಾಣಿಸಿಕೊಳ್ಳಲು ಸಾಧ್ಯವಾಯ್ತು ಎಂದಿದ್ದಾರೆ. ಇನ್ನೂ ಇದೊಂದೇ ಕಾರಣವಲ್ಲ ಕೆಲ ಒಮ್ಮೆ ನನ್ನ ಕುರಿತು ಹಬ್ಬಿರುವ ವದಂತಿಗಳು ಕೂಡ ಕಾರಣವಾಗಿರಬಹುದು ಎಂದು ತಾಪಿ ಪನ್ನು ಹೇಳಿದ್ದಾರೆ. ನನ್ನ ಜೊತೆ ಕೆಲಸ ಮಾಡುವುದು ಸುಲಭ ಅಲ್ಲ, ನನ್ನನ್ನೂ ಪಳಗಿಸುವುದು ಕಷ್ಟ ಎಂದೆಲ್ಲಾ ಕೆಲವರು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ಸುದ್ದಿಗಳು ನನ್ನ ಕಿವಿಗೆ ಕೂಡ ಬಿದ್ದಿವೆ ಎಂದು ಹೇಳಿರುವ ತಾಪ್ಪಿ ಪನ್ನು ಯಾಕೆ ನನ್ನ ಬಗ್ಗೆ ಈ ತರಹದ ಅಪಪ್ರಚಾರ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನನ್ನ ಜೊತೆ ಕೆಲಸ ಮಾಡಿದ ನಿರ್ದೇಶಕರು ನನ್ನ ಜೊತೆ ಹಲವು ಬಾರಿ ಕೆಲಸ ಮಾಡಿದ್ದಾರೆ, ಒಂದು ವೇಳೆ ನಾನು ದುರಂಹಕಾರಿಯಾಗಿದ್ದರೆ, ಅಥವಾ ನನ್ನಲ್ಲೇನೋ ಸಮಸ್ಯೆ ಇದ್ದರೆ ಅವರು ಯಾಕೆ ನನ್ನ ಜೊತೆ ಮತ್ತೆ ಕೆಲಸ ಮಾಡುತ್ತಿದ್ದರು ಎಂದು ಪ್ರಶ್ನೆಯನ್ನು ಕೂಡ ಕೇಳಿರುವ ತಾಪಿ ಪನ್ನು ಬಹುಶಃ ಅವರಿಗೆ ನನ್ನ ಬಗ್ಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ನಾನು ಹೆಚ್ಚು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಯಾಕೆಂದರೆ ನನ್ನ ಕೆಲಸವೇ ನನ್ನ ಬಗ್ಗೆ ಮಾತನಾಡಬೇಕು ಎನ್ನುವುದು ನನ್ನ ಭಾವನೆ ಎಂದು ಹೇಳಿದ್ದಾರೆ. ಈ ದಾರಿ ತುಸು ಕಷ್ಟ ಆದರೂ ಕೂಡ ನೆಮ್ಮದಿ ಇದೆ ಎಂದಿದ್ದಾರೆ. ತಾಪ್ತಿ ಪನ್ನು ಅವರ ಈ ಮಾತು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.