ಗುವಾಹಟಿ: ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗೌರವ್ ಗೊಗೊಯಿ ಅವರಿಗೆ ಪಾಕಿಸ್ತಾನದ ನಂಟಿದೆ ಎಂದು ಬಿಜೆಪಿ ಆರೋಪ ಮಾಡುತ್ತಿರುವ ಬೆನ್ನಲ್ಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಗೊಗೊಯಿ ಅವರನ್ನು ಮಂಗಳವಾರ ಭಾರತ-ಫಿಲಿಪ್ಪೀನ್ಸ್ ಫ್ರೆಂಡ್ಶಿಪ್ ಗ್ರೂಪ್ನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ.
ಈ ಬೆಳಳವಣಿಗೆ ನಂತರ ಗೊಗೊಯಿ ಮತ್ತು ಅವರ ಪತ್ನಿಯ ವಿರುದ್ಧ ಪಾಕಿಸ್ತಾನ ನಂಟು ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಪಡಿಸಿದೆ.
ವಿವಿಧ ದೇಶಗಳ ಜತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಉತ್ತಮಪಡಿಸಲು ಓಂ ಬಿರ್ಲಾ ಅವರು ಸಂಸತ್ ಸದಸ್ಯರನ್ನು ಒಳಗೊಂಡ ಹಲವು ಸಂಸದೀಯ ಗುಂಪುಗಳನ್ನು ರಚಿಸಿದ್ದಾರೆ. ಗೊಗೊಯಿ ನೇಮಕವು ಅಸ್ಸಾಂನಲ್ಲಿ ಏಪ್ರಿಲ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ನಡೆದಿದೆ ಎಂದು ಮೂಲಗಳು ಹೇಳುತ್ತಿವೆ.
ಅಸ್ಸಾಂನ ಕಾಂಗ್ರೆಸ್ ಮುಖಂಡ ದೇಬಬ್ರತ ಸೈಕಿಯಾ ಪ್ರತಿಕ್ರಿಯಿಸಿ ಗೊಗೊಯಿ ಅವರಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವ ವಿಶ್ವಾಸಾರ್ಹತೆಯನ್ನು ಅವರ ನೇಮಕವು ಖಚಿತಪಡಿಸುತ್ತದೆ. ಬಿಜೆಪಿಯ ಸುಳ್ಳಿನ ರಾಜಕೀಯಕ್ಕೆ ಸ್ಪೀಕರ್ ಸ್ಪಷ್ಟವಾದ ಉತ್ತರ ರವಾನಿಸಿದ್ದಾರೆ. ಬಿಜೆಪಿಯು ತನ್ನ ಆಧಾರ ರಹಿತ ಆರೋಪಕ್ಕೆ ಗೊಗೊಯಿ ಮತ್ತು ಅವರ ಪತ್ನಿಯ ಬೇಷರತ್ ಕ್ಷಮೆಯಾಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.