ಬೆಂಗಳೂರು: ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ಗೆ ರೂ.5 ರಿಂದ ರೂ. 7ಕ್ಕೆ ಹೆಚ್ಚಿಸುವ ಸಾಧ್ಯತಗಳಿವೆ. ಈ ಸಂಬಂಧ ಈ ಬಾರಿಯ ಬಜೆಟ್ ನಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೋತ್ಸಾಹಧನ ಏರಿಸುವುದಾಗಿ ಪ್ರಕಟಿಸಿದ್ದರು. ಆದರೆ ಇದುವರೆಗೂ ಈ ನಿರ್ಧಾರ ಜಾರಿಯಾಗಿರಲಿಲ್ಲ. ಅಧಿಕೃತವಾಗಿ ಬಜೆಟ್ ಮೂಲಕವೇ ಪ್ರಕಟಿಸಿ ಜಾರಿಗೊಳಿಸುವ ಉದ್ದೇಶ ಇದೆ ಎಂದು ತಿಳಿದು ಬಂದಿದೆ.
ವರ್ಷದಿಂದ ವರ್ಷಕ್ಕೆ ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ 1 ಕೋಟಿ ಲೀಟರ್ ಹಾಲನ್ನು ಕೆಎಂಎಫ್ ಸಂಗ್ರಹ ಮಾಡುತ್ತಿದ್ದು, ಪ್ರೋತ್ಸಾಹಧನವನ್ನು ಹೆಚ್ಚಿಸುವ ಮೂಲಕ ಹಾಲಿನ ಉತ್ಪಾದನೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ ರೂ.3 ಏರಿಕೆ ಮಾಡಿ ಸಹಾಯಧನವನ್ನೂ ಹೆಚ್ಚಿಸಿದ್ದೇವೆ. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ವರ್ಗ ಮಾಡಲಾಗುತ್ತಿದೆ. ಮೇವಿನ ದರ, ಪಶು ಆಹಾರ ಸಹಿತ ಮತ್ತಿತರೆ ಉತ್ಪನ್ನಗಳ ದರ ಏರಿಕೆಯಿಂದ ಪ್ರೋತ್ಸಾಹಧನ ಹೆಚ್ಚಿಸುವ ಬೇಡಿಕೆ ಇದೆ. ಈ ಹಿಂದೆ ನಾವೇ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರೋತ್ಸಾಹಧನವನ್ನು ರೂ. 7 ಹೆಚ್ಚಳ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದರು.