'ಕಾಂತಾರ- 1' ಬಳಿಕ ರಿಷಬ್ ಶೆಟ್ಟಿ ಯಾವ ಚಿತ್ರದಲ್ಲಿ ನಟಿಸ್ತಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಎರಡೂರು ಸಿನಿಮಾಗಳಲ್ಲಿ ನಟಿಸೋಕೆ ಒಪ್ಪಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ಸಿನಿಮಾ ಕೆಲಸಗಳು ಆರಂಭವಾಗಿಲ್ಲ. 'ಜೈ ಹನುಮಾನ್', ಶಿವಾಜಿ ಬಯೋಪಿಕ್ ಜೊತೆ ಮತ್ತೊಂದು ತೆಲುಗು ಚಿತ್ರಕ್ಕೆ ಡಿವೈನ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಮಾಲಿವುಡ್ ಅಂಗಳದಲ್ಲಿ 'ರಾಂಡಾಮೂಳಂ' ಚಿತ್ರಕ್ಕೆ ರಿಷಬ್ ಶೆಟ್ಟಿ ಹೆಸರು ಕೇಳಿಬರ್ತಿದೆ. ಇದು ಮಲಯಾಳಂ ಚಿತ್ರರಂಗದಲ್ಲೇ ಬಹಳ ದುಬಾರಿ ಸಿನಿಮಾ. ಏಳೆಂಟು ವರ್ಷಗಳ ಹಿಂದೆ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿತ್ತು. ಕರಾವಳಿ ಮೂಲದ ಉದ್ಯಮಿ ಬಿಆರ್ ಶೆಟ್ಟಿ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. 1000 ಕೋಟಿ ರೂ. ಬಜೆಟ್ನಲ್ಲಿ ಹಲವು ಭಾಗಗಳಾಗಿ ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗ್ತಿತ್ತು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಸಿನಿಮಾ ನಿಂತಿದ್ದಾಗಿ ನಿರ್ಮಾಪಕರು ಸ್ಪಷ್ಟಪಡಿಸಿದ್ದರು. ಈ ಚಿತ್ರವನ್ನು ರಿಷಬ್ ಶೆಟ್ಟಿ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.ಸ್ವತಃ ರಿಷಬ್ ಶೆಟ್ಟಿ 'ರಾಂಡಾಮೂಳಂ' ಕಾದಂಬರಿ ಆಧರಿಸಿ ಸಿನಿಮಾ ನಿರ್ದೇಶಿಸಿ ನಟಿಸುತ್ತಾರೆ ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಇದೀಗ ಸ್ಪಷ್ಟನೆ ಸಿಕ್ಕಿದೆ. ಮಲಯಾಳಂ ಲೇಖಕ ಎಂ. ಟಿ. ವಾಸುದೇವನ್ ನಾಯರ್ ಬರೆದ ಕಾದಂಬರಿ ಇದು. ಮಹಾಭಾರತವನ್ನು ಭೀಮನ ದೃಷ್ಟಿಕೋನದಲ್ಲಿ ಕಲ್ಪಿಸಿಕೊಂಡು ಬರೆದಿರುವ 'ರಾಂಡಾಮೂಳಂ' ಕಾದಂಬರಿ ಬಹಳ ಜನಪ್ರಿಯ. ಈ ಕಾದಂಬರಿ ಆಧರಿಸಿ ವಿ.ಎ. ಶ್ರೀಕುಮಾರ್ ಮೆನನ್ ಎಂಬುವವರು ಚಿತ್ರಕಥೆ ಸಿದ್ಧಪಡಿಸಿದ್ದರು. ಮೋಹನ್ ಲಾಲ್ ಭೀಮನ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು.
ಬರಹಗಾರ ಎಂ. ಟಿ. ವಾಸುದೇವನ್ ನಾಯರ್ ಹಾಗೂ ನಿರ್ದೇಶಕ ವಿ.ಎ. ಶ್ರೀಕುಮಾರ್ ಮೆನನ್ ನಡುವಿನ ಭಿನ್ನಾಭಿಪ್ರಾಯಗಳಿಂದ ಸಿನಿಮಾ ನಿಂತು ಹೋಗಿತ್ತು. ಆದರೆ ಇವತ್ತಿಗೂ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಸ್ವತಃ ವಾಸುದೇವನ್ ನಾಯರ್ ಮಗಳು ಹೇಳುವಂತೆ ಶೀಘ್ರದಲ್ಲೇ ಸಿನಿಮಾ ಘೋಷಣೆ ಆಗಲಿದೆ. ಆದರೆ ಯಾರು ನಿರ್ದೇಶನ ಮಾಡ್ತಾರೆ, ಯಾರ್ಯಾರು ನಟಿಸುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಈ ಚಿತ್ರಕ್ಕೆ ಕೆಲಸ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಆಕೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.'ಕಾಂತಾರ- 1' ಗೆಲುವಿನ ಬಳಿಕ ರಿಷಬ್ ಶೆಟ್ಟಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದೆ 'ಜೈ ಹನುಮಾನ್' ಚಿತ್ರದಲ್ಲಿ ನಟಿಸ್ತೀನಿ ಎಂದು ಹೇಳಿದ್ದಾರೆ. ಇನ್ನುಳಿದಂತೆ 'ರಾಂಡಾಮೂಳಂ' ಚಿತ್ರಕ್ಕಾಗಿ ಕೆಲಸ ಮಾಡುತ್ತಾರೆ ಎನ್ನುವುದು ಕೇವಲ ವದಂತಿ ಎನ್ನಲಾಗ್ತಿದೆ. ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದು ರಿಷಬ್ ಆಪ್ತ ಮೂಲಗಳಿಂದ ಫಿಲ್ಮಬೀಟ್ ಕನ್ನಡಕ್ಕೆ ಮಾಹಿತಿ ಲಭ್ಯವಾಗಿದೆ. ರಿಷಬ್ ಈ ಚಿತ್ರದಲ್ಲಿ ನಟಿಸ್ತಾರಾ? ಎನ್ನುವ ಪ್ರಶ್ನೆಗೆ "ಇಲ್ಲ" ಎನ್ನುವ ಉತ್ತರ ಸಿಕ್ಕಿದೆ.
'ಕಾಂತಾರ' ಬ್ಲಾಕ್ಬಸ್ಟರ್ ಹಿಟ್ ಬಳಿಕ ಪ್ರೀಕ್ವೆಲ್ಗಾಗಿ ರಿಷಬ್ ಶೆಟ್ಟಿ 3 ವರ್ಷ ತನು ಮನ ಅರ್ಪಿಸಿದ್ದರು. ಅವರ ಶ್ರದ್ಧೆ, ಸಿನಿಮಾ ಮೇಲಿನ ಪ್ರೀತಿ ನೋಡಿದರೆ 'ರಾಂಡಾಮೂಳಂ' ರೀತಿಯ ದೊಡ್ಡ ಪ್ರಾಜೆಕ್ಟ್ ಅನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ನೂರಾರು ಕೋಟಿ ಸುರಿದು ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಿಷಬ್ ನಂಬಿ ಹಣ ಹೂಡಲು ನಿರ್ಮಾಪಕರು ಧೈರ್ಯ ಮಾಡುತ್ತಾರೆ. ಡಿವೈನ್ ಸ್ಟಾರ್ ಚಿತ್ರ ಒಪ್ಪಿಕೊಂಡು ನಿರ್ದೇಶಿಸಿ ನಟಿಸಿದರೆ ಇತಿಹಾಸ ಸೃಷ್ಟಿಸಬಹುದು.
ಭೀಮನ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಆದರೆ ನಿಜಕ್ಕೂ ಅಂತಹ ಚರ್ಚೆ ನಡೀತಿದ್ಯಾ? ನಿಜಕ್ಕೂ 'ರಾಂಡಾಮೂಳಂ' ಸಿನಿಮಾ ಭಾಗವಾಗ್ತಾರಾ ಡಿವೈನ್ ಸ್ಟಾರ್? ಅಭಿಮಾನಿಗಳಿಗೆ ರಿಷಬ್ ಸಿಹಿಸುದ್ದಿ ಕೊಡ್ತಾರಾ? ಕಾದು ನೋಡಬೇಕಿದೆ.