ರಾಜಸ್ಥಾನದ ಉದಯಪುರ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಮದುವೆ ಸಂಭ್ರಮ ಅಧಿಕೃತವಾಗಿ ಆರಂಭವಾಗಿದೆ. ಕುಟುಂಬದವರು ಹಾಗೂ ಅತಿ ಆಪ್ತ ವಲಯದ ಅತಿಥಿಗಳ ಸಮ್ಮುಖದಲ್ಲಿ ಖಾಸಗಿ ವಾತಾವರಣದಲ್ಲಿ ವಿವಾಹ ಪೂರ್ವ ಶಾಸ್ತ್ರಗಳು ನೆರವೇರುತ್ತಿವೆ. ಬುಧವಾರ ಫೆಬ್ರವರಿ 25ರಂದು ಹಳದಿ ಶಾಸ್ತ್ರ ಜರುಗಿದ್ದು, ಅದರ ಫೋಟೋಗಳನ್ನು ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಆಶಿಕಾ ರಂಗನಾಥ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಶಾಸ್ತ್ರಕ್ಕೆ ವಿಶೇಷ ಅಲಂಕಾರ, ಸಾಂಪ್ರದಾಯಿಕ ಸಜ್ಜು ಹಾಗೂ ರಾಜಸ್ಥಾನಿ ಶೈಲಿಯ ಸೌಂದರ್ಯ ವಿಶೇಷ ಆಕರ್ಷಣೆಯಾಗಿದೆ.
ಕನ್ನಡ ಚಿತ್ರರಂಗದಿಂದ ಕೆಲವೇ ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ವೃತ್ತಿಜೀವನದ ಆರಂಭದ ದಿನಗಳಿಂದಲೂ ರಶ್ಮಿಕಾ ಮತ್ತು ಆಶಿಕಾ ನಡುವಿನ ಸ್ನೇಹದ ಬಾಂಧವ್ಯ ಹಿನ್ನೆಲೆಯಲ್ಲಿ ಆಶಿಕಾ ರಂಗನಾಥ್ ಮದುವೆ ಸಮಾರಂಭಕ್ಕೆ ಹಾಜರಾಗಿದ್ದಾರೆ. ಸಿನಿಮಾ ಕೆಲಸಗಳಿಗೆ ವಿರಾಮ ನೀಡಿ ಅವರು ಉದಯಪುರಕ್ಕೆ ತೆರಳಿರುವುದು ಗಮನಾರ್ಹ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಈ ಜೋಡಿ ತಮ್ಮ ಮದುವೆಗೆ ಕೇವಲ 100 ಮಂದಿಗೆ ಮಾತ್ರ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಫೆಬ್ರವರಿ 25ರ ರಾತ್ರಿ ಹಳದಿ ಶಾಸ್ತ್ರದ ಬಳಿಕ ಸಂಗೀತ್ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳು ಹಾಡು-ನೃತ್ಯದ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 26ರಂದು ಮದುವೆ ಶಾಸ್ತ್ರ ನಡೆಯಲಿದ್ದು, ಹಲವು ವರ್ಷಗಳ ಡೇಟಿಂಗ್ ಬಳಿಕ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಸಪ್ತಪದಿ ತುಳಿಯಲಿದ್ದಾರೆ. ಬಳಿಕ ನಡೆಯಲಿರುವ ಆರತಕ್ಷತೆಯಲ್ಲಿ ಅನೇಕ ಸಿನಿತಾರೆಯರು ಭಾಗವಹಿಸುವ ನಿರೀಕ್ಷೆ ಇದೆ. ಅಭಿಮಾನಿಗಳು ಕ್ಷಣಕ್ಷಣದ ಅಪೋಟ್ಗಾಗಿ ಕಾದಿದ್ದಾರೆ.