ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ಸಂಪೂರ್ಣವಾಗಿ ಏಕಪಕ್ಷೀಯವಾಗಿದ್ದು, ಸರ್ಕಾರ ಭಾರತವನ್ನು ಮಾರಾಟ ಮಾಡಲು ಹೊರಟಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಅವರು ಇಂದು ಲೋಕಸಭೆಯಲ್ಲಿ ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.
ಯುದ್ಧದ ಯುಗ ಮುಗಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ನಾವು ಯುದ್ಧದ ಯುಗಕ್ಕೆ ಚಲಿಸುತ್ತಿದ್ದೇವೆ. ಅಪಾಯಕಾರಿ ಜಗತ್ತಿಗೆ ಹೆಜ್ಜೆ ಇಡುವಾಗ ನಾವು ನಮ್ಮ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ತಮ್ಮ ಭಾಷಣದಲ್ಲಿ ಕೃತಕ ಬುದ್ಧಿಮತ್ತೆಯ ಬೆದರಿಕೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ ಅವರು, ಅಪಾಯಕಾರಿ AI ತಂತ್ರಜ್ಞಾನ ಸಾವಿರಾರು ಸಾಫ್ಟ್ವೇರ್ ಎಂಜಿನಿಯರ್ ಗಳ ಉದ್ಯೋಗಕ್ಕೆ ಕುತ್ತು ತರಲಿದೆ. ಇಂತಹ ಸಮಸ್ಯೆಗಳಿಗೆ ಬಜೆಟ್ ನಲ್ಲಿ ಪರಿಹಾರ ನೀಡಿಲ್ಲ ಎಂದು ಹೇಳಿದರು.
ಅಮೆರಿಕವು ಭಾರತದ ದತ್ತಾಂಶವನ್ನು ಮಾತ್ರ ಬಯಸುತ್ತದೆ. ತನ್ನ ಡಾಲರ್ ಅನ್ನು ಉಳಿಸಿಕೊಳ್ಳಲು ಆ ದೇಶಕ್ಕೆ ನಮ್ಮ ದತ್ತಾಂಶ ಬೇಕಿದೆ. ಕೃತಕ ಬುದ್ಧಿಮತ್ತೆಯು ಅಪಾಯಕಾರಿ ಜಗತ್ತನ್ನು ಸೃಷ್ಟಿಸುತ್ತಿದೆ. ಆದರೂ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ನಿಬಂಧನೆಗಳನ್ನು ಮಾಡಿಲ್ಲ ಎಂದು ವಿವರಿಸಿದರು.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶದ ರೈತರು ದೊಡ್ಡ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀವು ಬಡ ರೈತರನ್ನು ಹತ್ತಿಕ್ಕಲು ಬಾಗಿಲು ತೆರೆದಿದ್ದೀರಿ. ಇದುವರೆಗೆ ಆಡಳಿತ ನಡೆಸಿದ ಯಾವುದೇ ಪ್ರಧಾನಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರ್ಕಾರ ದೇಶದ ಜವಳಿ ಉದ್ಯಮಕ್ಕೆ ಕೊನೆಯ ಮೊಳೆ ಹೊಡೆಯುತ್ತಿದೆಇಂಧನ ಭದ್ರತೆಯು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಹೂತು ಹೋಗಿದೆ. ಭಾರತ ಯಾವ ದೇಶದಿಂದ ತೈಲವನ್ನು ಖರೀದಿಸಬೇಕು ಎಂದು ಅಮೆರಿಕ ನಿರ್ಧಾರ ಮಾಡುತ್ತಿದೆ. ಒಂದು ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರದಲ್ಲಿದ್ದರೆ, ರೈತರನ್ನು ರಕ್ಷಿಸುತ್ತಿತ್ತು. ನಮ್ಮ ಇಂಧನವನ್ನು ರಕ್ಷಿಸುತ್ತಿದ್ದೆವು ಎಂದರು.