ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸಾವಿಗೆ ಕಾರಣವಾದ ವಿಮಾನ ಪತನದ ತನಿಖೆ ಪೂರ್ಣಗೊಳ್ಳುವವರೆಗೆ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರಿಂದ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ಎನ್ಸಿಪಿ (ಎಸ್ಪಿ) ಪ್ರಧಾನ ಕಾರ್ಯದರ್ಶಿ ರೋಹಿತ್ ಪವಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಗಮನಾರ್ಹವಾಗಿ, ವಿಮಾನ ಅಪಘಾತಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಎತ್ತಿ ತೋರಿಸಲು ರೋಹಿತ್ ಪವಾರ್ ಅವರು ಹಲವು ಬಾರಿ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ ಮತ್ತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಅಜಿತ ಪವಾರ್ ಸಂಬಂಧಿಯೂ ಆಗಿರುವ ಕರ್ಜತ್-ಜಮ್ಖೇಡ್ ಶಾಸಕ ರೋಹಿತ್ ಪವಾರ್ ತಮ್ಮ ಪತ್ರದಲ್ಲಿ, ಅಪಘಾತಕ್ಕೀಡಾದ ವಿಮಾನ ಹೊಂದಿದ್ದ ವಿಎಸ್ಆರ್ ಕಂಪನಿ ಮತ್ತು ಸಚಿವ ನಾಯ್ಡು ಅವರೊಂದಿಗಿನ ಸಂಬಂಧ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಬಗ್ಗೆ ಸ್ವತಂತ್ರ ಮತ್ತು ಸಮರ್ಥ ಪ್ರಾಧಿಕಾರದ ಮೂಲಕ ತನಿಖೆ ನಡೆಸುವಂತೆಯೂ ಅವರು ಆಗ್ರಹಪಡಿಸಿದ್ದಾರೆ.
ಮೋದಿ ಅವರೇ, ಯಾವತ್ತೂ ಅಜಿತ್ದಾದಾ ಅವರ ಕೊಡುಗೆಗಳನ್ನು ಗೌರವಿಸುತ್ತಿರಿ. ಆದ್ದರಿಂದ ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಬೇಕು ಎಂದು ನಾನು ವಿನಂತಿಸುತ್ತೇನೆ. ವಿಎಸ್ಆರ್ ಕಂಪನಿಗೆ ಸಂಬಂಧಿಸಿದಂತೆ ಡಿಜಿಸಿಎ ರಾಜಿ ಮಾಡಿಕೊಂಡಿದೆಯೇ ಎಂದು ತನಿಖೆ ನಡೆಯಬೇಕಿದೆ. ಆದ್ದರಿಂದ ಸಚಿವರ ರಾಜೀನಾಮೆ ಅನಿವಾರ್ಯ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಜನವರಿ 28 ರಂದು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಹತ್ತಿರ ಸಂಭವಿಸಿದ ವಿಮಾನ ಅಪಘಾತದಲ್ಲಿ ಎನ್ಸಿಪಿ ನಾಯಕ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟಿದ್ದರು.