2026-03-07 01:42:31

India signs agreement with UN to supply rice | ಜಾಗತಿಕ ಆಹಾರ ಭದ್ರತೆ ಅಕ್ಕಿ ಪೂರೈಕೆಗೆ ವಿಶ್ವಸಂಸ್ಥೆ ಜತೆ ಭಾರತ ಸಹಿ ಸಚಿವ ಪ್ರಲ್ಹಾದ ಜೋಶಿ | Speed News Kannada

India signs agreement with UN to supply rice | ಜಾಗತಿಕ ಆಹಾರ ಭದ್ರತೆ ಅಕ್ಕಿ ಪೂರೈಕೆಗೆ ವಿಶ್ವಸಂಸ್ಥೆ ಜತೆ ಭಾರತ ಸಹಿ ಸಚಿವ ಪ್ರಲ್ಹಾದ ಜೋಶಿ | Speed News Kannada

ನವದೆಹಲಿ: ಜಾಗತಿಕ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಭಾರತ ಬದ್ಧತೆ ಪ್ರದರ್ಶಿಸುತ್ತಿದ್ದು, ಇದೀಗ ಐದು ವರ್ಷಗಳ ಕಾಲ ಅಕ್ಕಿ ಪೂರೈಕೆಗೆ ವಿಶ್ವಸಂಸ್ಥೆ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಜಾಗತಿಕವಾಗಿ ಹಸಿವು ನೀಗಿಸುವ ಗುರಿಯೊಂದಿಗೆ ಹೆಜ್ಜೆ ಹಾಕಿರುವ ಭಾರತ, ಮಾನವೀಯತೆ ತೋರುವ ಜತೆಗೆ ಆಹಾರ ಪೂರೈಕೆಯಲ್ಲಿ ವಿಶ್ವಕ್ಕೇ ಬೆಂಬಲವಾಗಿ ನಿಂತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅಕ್ಕಿ ಪೂರೈಕೆಗಾಗಿ ಫೆ.18ರಂದು ಭಾರತೀಯ ಆಹಾರ ನಿಗಮ (FCI) ವಿಶ್ವ ಆಹಾರ ಕಾರ್ಯಕ್ರಮ (WFP) ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ ಎಂದಿದ್ದಾರೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಮ್ಮುಖದಲ್ಲಿ FCI CMD ರವೀಂದ್ರ ಕುಮಾರ್ ಅಗರ್ವಾಲ್ ಮತ್ತು WFP ಉಪ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಲ್ ಸ್ಕೌ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಕೆ:
ಒಪ್ಪಂದದ ಪ್ರಕಾರ FCI 2  ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು (25% ವರೆಗೆ ಮುರಿದ) WFPಗೆ ಪೂರೈಸುತ್ತದೆ. ಈ ಒಪ್ಪಂದ ಇದೇ 2026ರ ಫೆಬ್ರವರಿ 18ರಿಂದ ಐದು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಪರಸ್ಪರ ಒಪ್ಪಿಗೆ ಮೂಲಕ ವಿಸ್ತರಿಸಲೂಬಹುದು. ಅಕ್ಕಿ ಬೆಲೆಯನ್ನು ವಾರ್ಷಿಕ ಆಧಾರದ ಮೇಲೆ ಪರಸ್ಪರ ಒಪ್ಪಿಕೊಳ್ಳಲಾಗುತ್ತದೆ. ಪ್ರಸ್ತುತ ಬೆಲೆ ಕ್ವಿಂಟಲ್‌ಗೆ ₹2,800 ಆಗಿದ್ದು, ಇದೇ ಮಾರ್ಚ್ 31ರವರೆಗೆ ಮಾತ್ರ ಈ ಬೆಲೆ ನಿಗದಿಪಡಿಸಿರುತ್ತದೆ ಎಂದಿದ್ದಾರೆ.
ಜಾಗತಿಕವಾಗಿ ಅಪೌಷ್ಟಿಕತೆ ಮತ್ತು ಆಹಾರ ಅಭದ್ರತೆ ಎದುರಿಸುವಲ್ಲಿ ಭಾರತ ಅಂತರಾಷ್ಟ್ರೀಯ ಸಮುದಾಯದೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ. ಭಾರತದ ಈ ಬೆಂಬಲ ಮುಂದಿನ ಐದು ವರ್ಷಗಳಲ್ಲಿ ಪೌಷ್ಟಿಕ ಆಹಾರದೊಂದಿಗೆ ದುರ್ಬಲರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಲು WFP ಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಅಕ್ಕಿ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ವಿಶ್ವ ಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ಉಪ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಲ್ ಸ್ಕೌ, “ಭಾರತದೊಂದಿಗಿನ ಈ ಒಪ್ಪಂದವು ಜಾಗತಿಕ ಹಸಿವಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಕೃಷಿ ಪ್ರಧಾನ ರಾಷ್ಟ್ರ ಮತ್ತು ಜಾಗತಿಕ ಒಗ್ಗಟ್ಟಿನ ಪ್ರತಿಪಾದಕವಾಗಿರುವ ಭಾರತ, ಜಾಗತಿಕ 'ಶೂನ್ಯ ಹಸಿವು ನೀಗಿಸುವ ಗುರಿ'ಯನ್ನು ಕಾರ್ಯರೂಪಕ್ಕೆ ತತರುವಲ್ಲಿ ಸ್ಫೂರ್ತಿ ನೀಡುತ್ತದೆ. ಈ ಪರಿವರ್ತನಾತ್ಮಕ ಪಾಲುದಾರಿಕೆಗಾಗಿ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ ಎಂದರು.
ವಿಶ್ವಸಂಸ್ಥೆ ಜತೆಗಿನ ಈ ಪಾಲುದಾರಿಕೆ ಜಾಗತಿಕ ಆಹಾರ ಭದ್ರತೆಗೆ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ. ವಿಶ್ವಾದ್ಯಂತ ಮಾನವೀಯ ಅಗತ್ಯತೆಗಳನ್ನು ಪೂರೈಸುವಲ್ಲಿ WFP ಯೊಂದಿಗೆ ಸಹಕಾರವನ್ನು ಬಲಪಡಿಸುತ್ತದೆ ಎಂದು ಜೋಶಿ ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.