ಬೆಂಗಳೂರು: 6 ದಶಕಗಳ ಹಿಂದಿನ ʼಕರ್ನಾಟಕ ಅಬಕಾರಿ ಕಾಯ್ದೆ’ ಇನ್ನು ಮುಂದೆ ಇತಿಹಾಸದ ಪುಟ ಸೇರಲಿದೆ. ಸರ್ಕಾರ ಇನ್ನು ಮುಂದೆ ಮದ್ಯದ ಬೆಲೆ ನಿಗದಿಪಡಿಸುವುದಿಲ್ಲ. ಮದ್ಯದ ತಯಾರಕರೇ ಬೆಲೆ ನಿಗದಿ ಪಡಿಸಲು ಅವಕಾಶವನ್ನು ನೀಡಲಾಗಿದೆ. ಏಪ್ರಿಲ್ 1, 2026ರಿಂದ ಹೊಅ ನಿಯಮ ಜಾರಿಗೆ ಬರಲಿದೆ.
ಇಂದು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘೋಷಣೆ ಮಾಡಿದ್ದಾರೆ.
ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ, ’ಆಲ್ಕೋಹಾಲ್ ಇನ್ ಬೆವರೇಜ್’(AIB) ಎಂಬ ಪದ್ದತಿ ಜಾರಿಗೆ ಬರಲಿದ್ದು, ಇದರ ಪ್ರಕಾರ, ಮದ್ಯದ ಪ್ರಮಾಣದ ಬದಲಿಗೆ, ಪ್ರತಿ ಲೀಟರ್ ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ ಆಧಾರದ ಮೇಲೆ, ತೆರಿಗೆಯನ್ನು ನಿಗದಿಪಡಿಸಲಾಗುತ್ತದೆ. ಜತೆಗೆ ಪ್ರಸ್ತುತ ಇರುವ 16 ಸ್ಲ್ಯಾಬ್’ಗಳನ್ನು 8ಕ್ಕೆ ಇಳಿಸಲಾಗುತ್ತದೆ. ಡಿಸ್ಟಿಲರಿ ಮತ್ತು ಬ್ರಿವಿರೇಜ್’ಗಳು ದಿನದ 24ಗಂಟೆ ಕೆಲಸ ನಿರ್ವಹಿಸಲು ಅನುಮತಿಯನ್ನು ನೀಡಲಾಗಿದೆ.
ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು (Alcohol-in-Beverage – AIB) ಆಧರಿಸಿದ ತೆರಿಗೆ ಪದ್ದತಿಯನ್ನು gold standard ಎಂದು ಕರೆಯಲಾಗುತ್ತದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ, ಎಲ್ಲಾ ಪಾನೀಯಗಳ ಮೇಲೆ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್’ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಅಬಕಾರಿ ಸುಂಕ ವಿಧಿಸುವ ಪ್ರಕ್ರಿಯೆಗೆ ಹಂತ ಹಂತವಾಗಿ ಪರಿವರ್ತನೆಗೊಳ್ಳಲಿದೆ.
ತೆರಿಗೆ ಸೋರಿಕೆಯನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬ್ಲಾಕ್ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತದೆ. ಮದ್ಯ ರವಾನೆಗೆ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ-ಫೆನ್ಸ್ಡ್ ಇ-ಲಾಕ್ (geo-fenced e-lock systems) ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ.
2025-26ನೇ ಸಾಲಿನಲ್ಲಿ ಫೆಬ್ರವರಿ ತಿಂಗಳ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದ ಒಟ್ಟು 36,492 ಕೋಟಿ ರೂ.ಗಳ ರಾಜಸ್ವ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.12.7ರಷ್ಟು ಬೆಳವಣಿಗೆಯಾಗಿದೆ. 2026-27ನೇ ಸಾಲಿಗೆ 45,000 ಕೋಟಿ ರೂ.ಗಳ ಸಂಗ್ರಹಣಾ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ.