ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುವ ದಾರಿಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಇಟ್ಟವರ ಪತ್ತೆಗಾಗಿ ತೀವ್ರ ಶೋಧ ನಡೆಯುತ್ತಿದೆ.ಈ ನಿಟ್ಟಿನಲ್ಲಿ ಒಂದು ತಂಡ ತಮಿಳುನಾಡಿಗೆ ತೆರಳಿದೆ.
ಈ ಕೃತ್ಯ ಕಾಕತಾಳೀಯವೇ ಅಥವಾ ಉದ್ದೇಶಪೂರ್ವಕವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ದುಷ್ಕೃತ್ಯದ ಹಿಂದೆ ರಾಜ್ಯ ಅಥವಾ ಅಂತಾರಾಜ್ಯ ತಂಡದ ಸಂಚು ಅಡಗಿದೆಯೋ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ.
ಕಂಟ್ರೋಲ್ ರೂಂಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಲೋಹಿತ್ ಎಂಬಾತನನ್ನು ಪೊಲೀಸರು ತೀವ್ರ ತಪಾಸಣೆಗೊಳಪಡಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಈತ ಒಂದು ದಿನ ತಮಿಳುನಾಡಿಗೆ ಹೋಗಿರುವುದು ತಿಳಿದು ಬಂದಿದೆ. ಆತ ಅಲ್ಲಿಗೆ ಏಕೆ ಹೋಗಿದ್ದ, ಅಲ್ಲಿಂದ ಜಿಲೆಟಿನ್ ಕಡ್ಡಿಗಳನ್ನು ತಂದಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ತಮಿಳುನಾಡಿನಲ್ಲಿ ಜಿಲೆಟಿನ್ ಕಡ್ಡಿ ತಯಾರಿಕೆಯ ಕಾರ್ಖಾನೆಗಳು ಹೆಚ್ಚಾಗಿದ್ದು, ತನಿಖಾ ತಂಡ ಆ ಕಾರ್ಖಾನೆಗಳಿಗೂ ಭೇಟಿ ನೀಡಿ, ಜಿಲೆಟಿನ್ ಕಡ್ಡಿ ತಯಾರಿಸುವವರು ಹಾಗೂ ಮಾರಾಟಗಾರರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.
ಈಗ ಸಿಕ್ಕಿರುವ ಜಿಲೆಟಿನ್ ಕಡ್ಡಿಗಳು ಸುಮಾರು 2 ವರ್ಷಕಿಂತಲೂ ಹಳೆಯವಾಗಿದ್ದು ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡಿವೆ. ಒಂದು ವೇಳೆ ಅದನ್ನು ಸ್ಫೋಟಿಸಿದರೂ ಹೆಚ್ಚು ಹಾನಿ ಉಂಟು ಮಾಡುವ ಸಂಭವ ಇರಲಿಲ್ಲ.
ಇವು ನಿರುಪಯೋಗಿ ಎಂದು ಕ್ವಾರಿಗಳಲ್ಲಿ ಕೆಲಸ ಮಾಡುವವರು ಇಟ್ಟು ಹೋಗಿರಬಹುದೇ ಎಂಬ ಅನುಮಾನವೂ ಕಾಡುತ್ತಿದೆ.