ಕೆವಿಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ 'ಹಯಗ್ರೀವ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಘು ಕುಮಾರ್ ಓಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಧನ್ನೀರ್ ಗೌಡ ಜೋಡಿಯಾಗಿ ಸಂಜನಾ ಆನಂದ್ ಮಿಂಚಿದ್ದಾರೆ. ಮೊದಲ ದಿನವೇ ಚಿತ್ರಕ್ಕೆ ಕೊಂಚ ಹಿನ್ನಡೆಯಾಗಿದೆ.
ಶುಕ್ರವಾರ(ಫೆಬ್ರವರಿ 27) ಸಿನಿಮಾ ಬೆಳಗ್ಗೆ ಬಿಡುಗಡೆ ಆಗುವುದು ವಾಡಿಕೆ. ಆದರೆ ಮೊದಲ ದಿನವೇ 'ಹಯಗ್ರೀವ' ಸಿನಿಮಾ ಎರಡು ಶೋಗಳಲ್ಲಿ ಪ್ರದರ್ಶನವಾಗುತ್ತಿಲ್ಲ. ಬೆಳಗ್ಗೆ ಹಾಗೂ ಮಧ್ಯಾಹ್ನದ ಶೋಗಳು ಇರುವುದಿಲ್ಲ. ನೇರವಾಗಿ ಸಂಜೆ 4.30ಕ್ಕೆ ಚಿತ್ರದ ಪ್ರದರ್ಶನ ಆರಂಭವಾಗಲಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ದರ್ಶನ್ ಅಭಿಮಾನಿಗಳು ಕೂಡ 'ಹಯಗ್ರೀವ' ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ದರ್ಶನ್ ಆಪ್ತ ಬಳಗದಲ್ಲಿ ಧನ್ನೀರ್ ಗುರ್ತಿಸಿಕೊಂಡಿರುವುದು ಗೊತ್ತೇಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಇದ್ದಾರೆ. ಅಲ್ಲಿಂದಲೇ 'ಹಯಗ್ರೀವ' ಚಿತ್ರಕ್ಕೆ ಶುಭ ಕೋರಿದ್ದಾರೆ. ವಿಜಯಲಕ್ಷ್ಮಿ ಸದ್ಯ ದರ್ಶನ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಂಡಲ್ ಮಾಡುತ್ತಿದ್ದಾರೆ.
"ನಮ್ಮ ಧನ್ನೀರ್ ಅಭಿನಯದ ಹೊಸ ಸಿನಿಮಾ 'ಹಯಗ್ರೀವ' ನಾಳೆ ತೆರೆಗೆ ಬರ್ತಾ ಇದೆ. ಈ ಚಿತ್ರವು ಧನ್ನೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ, ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ. ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ 'ಹಯಗ್ರೀವ' ಸಿನಿಮಾ ನೋಡಿ" ಎಂದು ದರ್ಶನ್ ಶುಭಹಾರೈಕೆಯನ್ನು ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. 'ಹಯಗ್ರೀವ' ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಧನ್ನೀರ್ ಅಬ್ಬರಿಸಿದ್ದಾರೆ. ಬಿಗ್ಬಾಸ್ ವಿನ್ನರ್ ಗಿಲ್ಲಿ ಕೂಡ ಸಣ್ಣ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ತಾರಾ, ರಂಗಾಯಣ ರಘು, ಸಾಧು ಕೋಕಿಲ, ರವಿಶಂಕರ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ಹಿಟ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.
ಬಹಳ ಹಿಂದೆ ಶುರುವಾಗಿದ್ದ 'ಹಯಗ್ರೀವ' ಸಿನಿಮಾ ಕೊಂಚ ತಡವಾಗಿ ಚಿತ್ರಮಂದಿರಗಳಿಗೆ ಬರ್ತಿದೆ. ಇನ್ನು ಮೊದಲ ದಿನ ಶೋ ತಡವಾಗಿ ಆರಂಭವಾಗುತ್ತಿರುವ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. "ನಮಸ್ತೆ ಕಾರಣಾಂತರಗಳಿಂದ 'ಹಯಗ್ರೀವ' ಚಿತ್ರದ ಮೊದಲ ದಿನದ (ಶುಕ್ರವಾರ) ಬೆಳಿಗೆ 10:30 ಶೋ ಮಧ್ಯಾಹ್ನದ 1:30 ಶೋ ಇರುವುದಿಲ್ಲ. ಸಂಜೆ 4.30ಕ್ಕೆ ಕರ್ನಾಟಕ ರಾಜ್ಯಾದ್ಯಂತ ನಮ್ಮ ಹಯಗ್ರೀವ ಚಿತ್ರದ ಪ್ರದರ್ಶನಗಳು ಅದ್ದೂರಿಯಾಗಿ ಪ್ರಾರಂಭವಾಗುತ್ತದೆ ನೋಡಿ ಹರಸಿ ಬೆಂಬಲಿಸಿ" ಎಂದು ಚಿತ್ರತಂಡ ಮನವಿ ಮಾಡಿದೆ.
ಇಂಡಿಯನ್ ಮೈಥಾಲಜಿ ಆಧಾರವಾಗಿಟ್ಟುಕೊಂಡು 'ಹಯಗ್ರೀವ' ಚಿತ್ರದ ಕಥೆ ಮಾಡಿರುವುದಾಗಿ ಚಿತ್ರತಂಡ ಹೇಳಿದೆ. ಜ್ಯೂಡಾ ಸ್ಯಾಂಡಿ ಮ್ಯೂಸಿಕ್, ಗಿರೀಶ್ ಆರ್ ಗೌಡ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಶೈಲೇಶ್ ಕುಮಾರ್, ಚೇತನ್ ಸಿದ್ ಸಂಭಾಷಣೆ ಚಿತ್ರಕ್ಕಿದೆ. ಎರಡು ವಿಭಿನ್ನ ಶೇಡ್ ಗಳಿರೋ ಪಾತ್ರದಲ್ಲಿ ಧನ್ನೀರ್ ಅಬ್ಬರಿಸಿದ್ದಾರೆ. ಚಿತ್ರವನ್ನು ದೊಡ್ಡದಾಗಿ ಸ್ವಾಗತಿಸಲು ಧನ್ನೀರ್ ಗೌಡ ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರ್ತಿದೆ. 'ಹಯಗ್ರೀವ' ಹಾಗೂ 'ರೈಸ್ ಆಫ್ ಅಶೋಕ' ಜೊತೆಗೆ ಎರಡೂರು ಕನ್ನಡ ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬರಲಿವೆ. ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತದೆ ಕಾದು ನೋಡಬೇಕು.