ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುವ ಸುಳ್ಳು ಸುದ್ದಿ, ದ್ವೇಷಪೂರಿತ ಪೋಸ್ಟ್ ಮತ್ತು ತಪ್ಪು ಮಾಹಿತಿಗಳನ್ನು ಪತ್ತೆ ಮಾಡಲು ಅನುಕೂಲವಾಗುವಂತೆ ರೂ.67.26 ಕೋಟಿ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಾಂಶ ಖರೀದಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಸಬೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಈ ಸಂಬಂಧ ಮಾಹಿತಿ ಹಂಚಿಕೊಂಡರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ತಡೆಯಲು ರೂ.50 ಕೋಟಿ ವೆಚ್ಚದಲ್ಲಿ ಸೋಷಿಯಲ್ ಮೀಡಿಯಾ ಅನಲಿಟಿಕಲ್ ಸಲ್ಯೂಷನ್ ಮತ್ತು ರೂ. 7 ಕೋಟಿ ವೆಚ್ಚದಲ್ಲಿ ಸರ್ವರ್ ಮತ್ತು ಸರ್ವರ್ ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಈ ತಂತ್ರಾಂಶವು ಸ್ವಯಂಚಾಲಿತವಾಗಿ ಫೇಸ್ಬುಕ್, ಯೂಟ್ಯೂಬ್, ಎಕ್ಸ್, ಇನ್ಸ್ಟಾಗ್ರಾಂ ಸೇರಿ ಎಲ್ಲಾ ಮಾದರಿಯ ಸೋಷಿಯಲ್ ಮೀಡಿಯಾಗಳಲ್ಲಿ ಮಾಡಲಾಗುವ ಪೋಸ್ಟ್ ಗಳು ಮತ್ತು ಸುದ್ದಿ ಜಾಲತಾಣಗಳಲ್ಲಿ ಪ್ರಕಟಿಸಲಾಗುವ ಸುದ್ದಿಗಳನ್ನು ಪರಿಶೀಲನೆ ನಡೆಸಲಿದೆ. ಒಂದು ವೇಳೆ ಸುಳ್ಳುಮಾಹಿತಿ, ದ್ವೇಷಪೂರಿತ ಸುದ್ದಿಗಳು ಇದ್ದರೆ, ಸಂಬಂಧಿತ ಜಿಲ್ಲಾ ಘಟಕಕ್ಕೆ ಸ್ವಯಂಚಾಲಿತವಾಗಿ ಮಾಹಿತಿ ರವಾನೆಯಾಗಲಿದೆ ಎಂದು ಸಚಿವರು ವಿವರಿಸಿದರು.
ಗೃಹ ಇಲಾಖೆಯು ಈ ಘಟಕಗಳನ್ನು ನಿರ್ವಹಿಸಲಿದೆ. ಅಂತಹ ಪೋಸ್ಟ್ ಮಾಡಿದವರ ವಿರುದ್ಧ, ಈಗಿರುವ ಕಾನೂನಿನ ಅಡಿಯಲ್ಲಿಯೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಗತ್ಯ ಕಂಡು ಬಂದಲ್ಲಿ ಭವಿಷ್ಯದಲ್ಲಿ ಪ್ರತ್ಯೇಕ ಕಾನೂನು ರೂಪಿಸಲಾಗುತ್ತದೆ ಎಂದು ಅವರು ವಿವರಿಸಿದರು.