ದಕ್ಷಿಣದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ನಿರ್ದೇಶಕ ರಾಜ್ ನಿಧಿಮೋರು ಜೊತೆ ಎರಡನೇ ವಿವಾಹವಾಗಿದ್ದಾರೆ. ರಾಜ್ ಗೂ ಇದು ಎರಡನೇ ಮದುವೆಯೇ ಆಗಿರುವುದು ವಿಶೇಷ. ಸಮಂತಾ 2021ರ ಅಕ್ಟೋಬರ್ನಲ್ಲಿ ನಾಗ ಚೈತನ್ಯ ಅವರೊಂದಿಗೆ ವಿಚ್ಚೇದನ ಪಡೆದಿದ್ದರು.
ಆದರೆ ರಾಜ್ ಪರಿಚಯ 2019ರಲ್ಲೇ ಆಗಿತ್ತು. ಇದೇ ವಿಚಾರ ಹಿಡಿದು ಕೆಲವರು 'ರಾಜ್ ಆಗಮನದಿಂದಲೇ ವಿಚ್ಚೇದನ' ಎಂಬ ವದಂತಿ ಹಬ್ಬಿಸಿದ್ದರು.
ಈ ಬಗ್ಗೆ ಸಮಂತಾ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. "ವಿಚ್ಛೇದನ ಪಡೆದ ಬಳಿಕ ನಾನು ಹೊರ ಜಗತ್ತಿನ ಸಂಪರ್ಕವೇ ಕಡಿತ ಮಾಡಿಕೊಂಡಿದ್ದೆ. ಮತ್ತೆ ಯಾರ ಮೇಲಾದರೂ ಅವಲಂಬಿತರಾಗಬಹುದು ಎಂದು ಭಾವಿಸಿರಲಿಲ್ಲ. ಆದರೆ ಅದೃಷ್ಟವಶಾತ್ ಆ ರೀತಿಯ ಪ್ರೀತಿ ಮತ್ತು ಸ್ನೇಹವನ್ನು ಸ್ವೀಕರಿಸಿದೆ. ರಾಜ್ ಅವರಿಂದ ಸಾಕಷ್ಟು ಪ್ರೀತಿ ಸಿಕ್ಕಿತು," ಎಂದು ಹೇಳಿದ್ದಾರೆ.
ಡಿವೋರ್ಸ್ ಸಮಯದಲ್ಲಿ ತಾವು ತುಂಬಾ ಲೋ ಆಗಿದ್ದೆ ಎಂದು ಹೇಳಿದ ಸಮಂತಾ, "ರಾಜ್ ಜೊತೆ ಸ್ನೇಹ ಬೆಳೆಸಿದ ಬಳಿಕ ನನ್ನ ಜೀವನವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ" ಎಂದು ತಿಳಿಸಿದ್ದಾರೆ. ಅಂದರೆ, ನಾಗ ಚೈತನ್ಯ ಜೊತೆ ಸಂಬಂಧದಲ್ಲಿದ್ದ ಸಮಯದಲ್ಲಿ ರಾಜ್ ಜೊತೆ ವೃತ್ತಿಪರ ಸಂಬಂಧ ಮಾತ್ರವಿತ್ತು ಎಂಬುದನ್ನು ಸಮಂತಾ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯಿಂದ ವದಂತಿಗಳಿಗೆ ತೆರೆ ಬಿದ್ದಿದೆ.