ಬೆಂಗಳೂರುಮ ಜನವರಿ 30: ಫೆಬ್ರವರಿ 2 ರಿಂದ ಆರಂಭಗೊಳ್ಳಲಿರುವ ಶಿವಮೊಗ್ಗ ಜಿಲ್ಲೆಯ ಸಾಗರದ ವಿಶ್ವಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಬೆಂಗಳೂರಿನಲ್ಲಿ ನಟಶಿವರಾಜ್ ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಜಾತ್ರೆಗೆ ಆಹ್ವಾನಿಸಿದರು.
ಬೆಂಗಳೂರಿನ ನಿವಾಸದಲ್ಲಿ ಶಾಸಕರು ದೇವಿಯ ಭಾವಚಿತ್ರ ನೀಡಿ ಗಣ್ಯರನ್ನು ಆಹ್ವಾನಿಸಿದರು. ಶಾಸಕರ ಆಹ್ವಾನಕ್ಕೆ ಶಿವರಾಜ್ ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪ ಅತ್ಯಂತ ಪ್ರೀತಿಯಿಂದ ಸ್ಪಂದಿಸಿದ್ದು, ಜಾತ್ರೆಗೆ ಬರುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ನಟ ಶಿವರಾಜ್ ಕುಮಾರ್ ಮತ್ತು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಾಸಕರು ಹಲವು ಕಾಲ ಸಿನಿಮಾ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಶಿವಮೊಗ್ಗ ಜಿಲ್ಲೆಯೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ರಾಜ್ ಕುಟುಂಬದ ಕುಡಿ ಶಿವಣ್ಣ ಅವರು ಸಾಗರ ಜಾತ್ರೆಗೆ ಆಗಮಿಸಲಿದ್ದಾರೆ ಎಂಬ ಸುದ್ದಿ ಕೇಳಿ ಸಾಗರ ಜನತೆಯಲ್ಲಿ ಸಂಭ್ರಮ ಮನೆಮಾಡಿದೆ.