ಪುಣೆ: ಮರಾಠಾ ಸಾಮ್ರಾಜ್ಯದ ಅಧಿಪತಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ ಅಂಗವಾಗಿ ಇಂದು ದೇಶಾದ್ಯಂತ ಶಿವಜಯಂತಿಯ ಸಂಭ್ರಮ ಮನೆಮಾಡಿದೆ. ಈ ವಿಶೇಷ ದಿನದಂದು ಬಾಲಿವುಡ್ ನಟ ರಿತೇಶ್ ದೇಶುಖ್ ಅವರು ಶಿವಾಜಿ ಮಹಾರಾಜರ ಜನ್ಮಸ್ಥಳವಾದ ಪುಣೆಯ ಶಿವನೇರಿ ಕೋಟೆಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಬೆಳಿಗ್ಗೆಯೇ ಕೋಟೆಗೆ ಆಗಮಿಸಿದ ರಿತೇಶ್, ಮಹಾರಾಜರ ಸ್ಮರಣಾರ್ಥ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಮಹಾರಾಷ್ಟ್ರ, ಉಡುಪುಗಳನ್ನು ಧರಿಸಿದ್ದ ಪುಟ್ಟ ಮಕ್ಕಳೊಂದಿಗೆ ನಟ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಾಜಿ ಮಹಾರಾಜರ ಜೀವನ ಮತ್ತು ಅವರು ನೀಡಿದ ಕೊಡುಗೆಗಳ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯ ಎಂದು ಹೇಳಿದರು.
“ಶಿವಾಜಿ ಮಹಾರಾಜರು ನಮಗೆಲ್ಲರಿಗೂ ಹೊಸ ಚೈತನ್ಯ ಮತ್ತು ಸ್ಫೂರ್ತಿ ನೀಡುವ ಶಕ್ತಿ. ಅವರು ರಾಷ್ಟ್ರಕ್ಕಾಗಿ ಮಾಡಿದ ಬಲಿದಾನ ಮತ್ತು ತ್ಯಾಗಗಳ ಬಗ್ಗೆ ಯುವಜನತೆಗೆ ತಿಳಿಸಿಕೊಡಬೇಕು. ನಾವೆಲ್ಲರೂ ಉತ್ತಮ ಮನುಷ್ಯರಾಗಿ ಬದುಕಲು ಪ್ರಯತ್ನಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ" ಎಂದು ರಿತೇಶ್ ಈ ಸಂದರ್ಭದಲ್ಲಿ ತಿಳಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಸೋಶಿಯಲ್ ಮೀಡಿಯಾ ಮೂಲಕ ಶಿವಾಜಿ ಮಹಾರಾಜರಿಗೆ ನಮನ ಸಲ್ಲಿಸಿದ್ದಾರೆ. ಮಹಾರಾಜರ ಆಡಳಿತ ಶೈಲಿ, ನ್ಯಾಯ ಮತ್ತು ಸ್ವಾಭಿಮಾನದ ಗುಣಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಅವರು ಸ್ಮರಿಸಿದ್ದಾರೆ. ಒಟ್ಟಾರೆಯಾಗಿ ಶಿವನೇರಿ ಕೋಟೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸಾವಿರಾರು ಭಕ್ತರು ಮತ್ತು ಅಭಿಮಾನಿಗಳು ಮಹಾರಾಜರ ಸ್ಮರಣೆಯಲ್ಲಿ ತೊಡಗಿದ್ದಾರೆ.