ದಕ್ಷಿಣ ಚಿತ್ರರಂಗದ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಇತ್ತೀಚೆಗೆ ಕುಟುಂಬದವರ ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಅಭಿಮಾನಿಗಳನ್ನು ನೇರವಾಗಿ ಆಹ್ವಾನಿಸಲು ಸಾಧ್ಯವಾಗದಿದ್ದರೂ, ತಮ್ಮ ಸಂತೋಷವನ್ನು ದೇಶಾದ್ಯಂತ ಇರುವ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಈ ಜೋಡಿ ವಿಶೇಷ ನಿರ್ಧಾರ ಕೈಗೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮಾರ್ಚ್ 1ರಂದು ಮಿಠಾಯಿ ತುಂಬಿದ ಟ್ರಕ್ಗಳನ್ನು ದೇಶಾದ್ಯಂತ ಕಳುಹಿಸಿ ಸಿಹಿ ಹಂಚಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ ವಿವಿಧ ರಾಜ್ಯಗಳ ದೇವಸ್ಥಾನಗಳಲ್ಲಿ ಅನ್ನದಾನ ಮಾಡಲು ದೇಣಿಗೆ ನೀಡುತ್ತಿರುವುದಾಗಿ ಹೇಳಿದ್ದಾರೆ.
''ನಮ್ಮ ಪ್ರೀತಿ ಮತ್ತು ಪಯಣದಲ್ಲಿ ನೀವು ಯಾವಾಗಲೂ ಜೊತೆಯಾಗಿದ್ದೀರಿ. ನಿಮ್ಮೆಲ್ಲರ ಜೊತೆ ನಮ್ಮ ಮದುವೆಯನ್ನು ಸಂಭ್ರಮಿಸುವುದು ನಮಗೆ ಸಂತೋಷ. ಭಾರತದಲ್ಲಿ ಸಂಭ್ರಮ ಎಂದರೆ ಸಿಹಿ ಮತ್ತು ಅನ್ನದಾನ. ಆದ್ದರಿಂದ ಮಿಠಾಯಿ ಟ್ರಕ್ಗಳನ್ನು ಕಳುಹಿಸುತ್ತಿದ್ದೇವೆ" ಎಂದು ಅವರು ಇನ್ಸಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ಸಿನಿಮಾಗಳಿಂದ ಆರಂಭವಾದ ಪ್ರೀತಿ ಗೀತಾ ಗೋವಿಂದಂ ಮತ್ತು ಡಿಯರ್ ಕಾಮೇಡ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ವೇಳೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವೆ ಪ್ರೀತಿ ಚಿಗುರಿತ್ತು. ದೀರ್ಘಕಾಲ ಗಾಸಿಪ್ಗಳ ನಡುವೆಯೇ ಸಾಗಿದ ಈ ಸಂಬಂಧಕ್ಕೆ ಇದೀಗ ಮದುವೆಯ ಮುದ್ರೆ ಬಿದ್ದಿದೆ. ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿರುವ ಈ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.