ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿದ ದಾಖಲೆಯೊಂದಿಗೆ, ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು, ಸೈದ್ಧಾಂತಿಕ ನಿಲುವುಗಳು, ರಾಜಕೀಯ ಹೋರಾಟಗಳಿಂದ ರಾಜ್ಯದ ಜನತೆಯ ಪ್ರೀತಿಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಸಿದ್ದರಾಮಯ್ಯ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ಸಂವಿಧಾನದ ಮೌಲ್ಯಗಳು, ಜಾತ್ಯತೀತ ಹಾಗೂ ಸಮಾಜವಾದಿ ತತ್ವಗಳಿಗೆ ಬದ್ಧರಾಗಿ, ಪ್ರಬುದ್ಧ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿದರು. ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸ್ಫೂರ್ತಿ ಅವರು.
ನನ್ನ ವೈಯಕ್ತಿಕ ರಾಜಕೀಯ ಬದುಕಿನಲ್ಲಿ, ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರ ಮಾರ್ಗದರ್ಶನ ಬಹುಮುಖ್ಯ ಪಾತ್ರವಹಿಸಿದೆ. ಐಟಿ, ಬಿಟಿ ಮತ್ತು ಪ್ರವಾಸೋದ್ಯಮದಂತಹ ಮಹತ್ವದ ಖಾತೆಗಳ ಜವಾಬ್ದಾರಿ ವೇಳೆ, ಸಂಪುಟದಲ್ಲಿನ ಅತಿ ಕಿರಿಯ ಸಚಿವ ಎಂಬ ಹಿಂಜರಿಕೆ ಉಂಟಾಗದಂತೆ ನನ್ನಲ್ಲಿ ಆತ್ಮವಿಶ್ವಾಸ ತುಂಬುವ ಜೊತೆಗೆ, ಜನಪರ ಯೋಜನೆಗಳನ್ನು ರೂಪಿಸಲು ಸ್ವಾತಂತ್ರ್ಯ ನೀಡಿದರು. ಪ್ರಸಕ್ತ ಅವಧಿಯಲ್ಲಿಯೂ ಎರಡು ಪ್ರಮುಖ ಖಾತೆಗಳ ಜವಾಬ್ದಾರಿಯುತ ಹೊಣೆಗಾರಿಕೆಯಲ್ಲಿ ಅವರ ಮಾರ್ಗದರ್ಶನ ಮೌಲ್ಯಯುತವಾಗಿತ್ತು.
ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರಮುಕ್ತ ಆಡಳಿತ, ಅಭಿವೃದ್ಧಿಪರ ಕೆಲಸಗಳನ್ನು ಮಾಡಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ತುಂಬಿವೆ. ಇಂತಹ ಮುತ್ಸದ್ಧಿ ನಾಯಕರ ಸಂಪುಟದಲ್ಲಿ ಸಚಿವ ಸ್ಥಾನ ನಿಭಾಯಿಸಿರುವುದು ನನಗೆ ಹೆಮ್ಮೆಯ ಸಂಗತಿ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿರುವುದು ನಮ್ಮೆಲ್ಲರಿಗೂ ಭಾವುಕ ಸಂಗತಿ. ತಮ್ಮ ಮೌಲ್ಯಗಳಿಗೆ ಕಟಿಬದ್ಧರಾಗಿ, ಸಮಾಜಮುಖಿ ಕಾರ್ಯಗಳಿಂದ ಜನರಿಗೆ ಹತ್ತಿರವಾಗಿದ್ದ ಶ್ರೀ ಸಿದ್ದರಾಮಯ್ಯ ಅವರ ಕೊಡುಗೆಗಳನ್ನು ನೆನೆಯೋಣ. ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಮೂಲಕ, ಕೋಮುವಾದಿ ಶಕ್ತಿಗಳಿಂದ ರಾಜ್ಯವನ್ನು ರಕ್ಷಿಸೋಣ.
ಸಿದ್ದರಾಮನಹುಂಡಿಯಿಂದ ವಿಧಾನಸೌಧದವರೆಗೆ ಅವರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ ಎಂದು ಹೇಳಿದ್ದಾರೆ.