ಕೋಲ್ಕತ್ತಾ: ಕಲ್ಯಾಣಿಯ ಬಂಗಾಳ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀಷರ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಮುಹಮ್ಮದ್ ಶಮಿ, 90 ರನ್ ಗಳಿಗೆ 8 ವಿಕೆಟ್ ಕಿತ್ತಿದ್ದಾರೆ.
ಆ ಮೂಲಕ, ತಮ್ಮನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲು ಬಿಸಿಸಿಐ ಆಯ್ಕೆದಾರರಿಗೆ ದಿಟ್ಟ ಸಂದೇಶ ರವಾನಿಸಿದ್ದಾರೆ. ತಮ್ಮ ಹಿಂದಿನ ಲಯಕ್ಕೆ ಮರಳಿರುವ ಮುಹಮ್ಮದ್ ಶಮಿ, ಜಮ್ಮು ಮತ್ತು ಕಾಶ್ಮೀರ ತಂಡದ ಬ್ಯಾಟರ್ ಗಳನ್ನು ಅಕ್ಷರಶಃ ಕಾಡಿದರು. ಮುಹಮ್ಮದ್ ಶಮಿಯ ಮಾರಕ ಬೌಲಿಂಗ್ ದಾಳಿಗೆ ಜಮ್ಮು ಮತ್ತು ಕಾಶ್ಮೀರ ತಂಡ 302 ರನ್ ಗಳಿಗೆ ಆಲೌಟ್ ಆಯಿತು.ಇದಕ್ಕೂ ಮುನ್ನ, ಸುದೀಪ್ ಕುಮಾರ್ ಘರಮಿ(146)ಯ ಅಮೋಘ ಶತಕದ ನೆರವಿನಿಂದ ಪಶ್ಚಿ ಮ ಬಂಗಾಳ ತಂಡವು 328 ರನ್ ಗಳ ಉತ್ತಮ ಮೊತ್ತವನ್ನು ಪೇರಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ತಂಡ, ನಿನ್ನೆ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ ಕೇವಲ 13 ರನ್ ಗಳಿಸಿತ್ತು. ಆದರೆ, ಮಧ್ಯಮ ಕ್ರಮಾಂಕದ ಅಬ್ದುಲ್ ಸಮದ್ (82) ಹಾಗೂ ನಾಯಕ ಪಾರಸ್ ದೊಗ್ರಾ (58) ಪಶ್ಚಿಮ ಬಂಗಾಳ ತಂಡಕ್ಕೆ ತಮ್ಮ ಬ್ಯಾಟ್ ನಿಂದ ತಿರುಗೇಟು ನೀಡಿದರು. ಹೀಗಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ತಂಡ 302 ರನ್ ಗಳ ಗೌರವಯುತ ಮೊತ್ತ ಗಳಿಸಿತು.
ಮುಹಮ್ಮದ್ ಶಮಿಯವರ ಈ ಅದ್ಭುತ ಪ್ರದರ್ಶನ ಸಂಕೀರ್ಣ ಕಾಲಘಟ್ಟದಲ್ಲಿ ಬಂದಿದೆ. ತಮ್ಮನ್ನು ರಾಷ್ಟ್ರೀಯ ತಂಡದಿಂದ ಬದಿಗೆ ಸರಿಸಿದಂದಿನಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಮುಹಮ್ಮದ್ ಶಮಿ, ಇಂದಿನ ಪ್ರದರ್ಶನದ ಮೂಲಕ, ತಮ್ಮನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸುವಂತೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆದಾರರ ಮೇಲೆ ಬಲವಾದ ಒತ್ತಡವನ್ನೇ ಹೇರಿದ್ದಾರೆ.