ಬೆಂಗಳೂರು: ಬಾಗಲಕೋಟೆಯಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರ ಹೆಸರಿನಲ್ಲಿ, ಮತಬ್ಯಾಂಕ್ ಇದೆ ಎಂಬ ಕಾರಣಕ್ಕೆ ಓಲೈಕೆ ಮಾಡುತ್ತಾ ಹೋದರೆ ರಾಜ್ಯ ಮತ್ತು ದೇಶಕ್ಕೆ ಗಂಡಾಂತರ ಕಾದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು.
ಶಾಂತಿ ಸಭೆಗೂ ಆ ಸಮುದಾಯದ ಮುಖಂಡರು ಬರುತ್ತಿಲ್ಲ. ಇಂತಹ ಬೆಳವಣಿಗೆಗಳಿಗೆ ಈಗಿನ ಸರಕಾರವೇ ನೇರ ಕಾರಣ. ಚಿತ್ತಾಪುರದಲ್ಲಿ ನಡೆದಿರುವ ಘಟನೆಗೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಕಾರಣ ಎಂಬ ಅನುಮಾನವಿದೆ. ಸ್ಥಳೀಯರೇ ಈ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದರು.
ಹಿಂದೂಗಳ ಮೇಲೆ ಚಿತಾವಣೆ ನಡೆಸುವ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು. ನೀವು ಹಿಂದೂಗಳನ್ನು ಯಾಕೆ ಟಾರ್ಗೆಟ್ ಮಾಡುತ್ತೀರಿ ಎಂಬುದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ನಾನು ಎಲ್ಲ ಮುಸ್ಲಿಮರನ್ನು ನಿಂದಿಸುವುದಿಲ್ಲ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಮಾತ್ರ ಅನ್ವಯಿಸುತ್ತದೆ. ನಾಲ್ಕು ಮಂದಿ ಮಾಡುವ ದುಷ್ಕೃತ್ಯಗಳಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮುಸಲ್ಮಾನ ಮುಖಂಡರೇ ಹೇಳುತ್ತಾರೆ. ಈ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಒತ್ತಾಯಿಸಿದರು.