ಉಡುಪಿ: ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಪದವಿ ನೀಡಬಾರದೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಇಂದು ಕಾರ್ಕಾಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದವರು ಸಚಿವರಾಗಲು ಬಯಸುವುದು ತಪ್ಪಲ್ಲ. ಆದರೆ ಅವರಿಗೆ ಮಂತ್ರಿ ಪದವಿ ನೀಡಬಾರದೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗಷ್ಟೇ ಮೊದಲ ಬಾರಿಗೆ ಆಯ್ಕೆಯಾದ 30ಕ್ಕೂ ಹೆಚ್ಚು ಶಾಸಕರು ಪಕ್ಷದ ವರಿಷ್ಠರಾದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದರು. ಇದನ್ನು ಶಾಸಕರೂ ಒಪ್ಪಿಕೊಂಡಿದ್ದರು.
ಮೊದಲ ಬಾರಿಗೆ ಆಯ್ಕೆಯಾದ ಐವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಇವರ ಬೇಡಿಕೆಯಾಗಿತ್ತು.
ಆದರೆ ಇವರ ಆಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಣ್ಣೀರೆರಚಿದ್ದಾರೆ.
ಮೊದಲ ಬಾರಿಗೆ ಆಯ್ಕೆಯಾದವರು ಸಚಿವರಷ್ಟೇ ಏಕೆ ಮುಖ್ಯಮಂತ್ರಿಯಾದ ಉದಾಹರಣೆಗಳೂ ಕಣ್ಣ ಮುಂದಿವೆ. ಮೊದಲ ಬಾರಿ ಆಯ್ಕೆಯಾದ ಅನೇಕ ಶಾಸಕರು ಸಚಿವರಾಗಿ ಅಮೋಘ ಸಾಧನೆ ಮಾಡಿದ ಸಚಿವರೂ ಇದ್ದಾರೆ. ನಾಲ್ಕೈದು ಬಾರಿ ಗೆದ್ದು ಸಚಿವರಾದವರು ದೊಡ್ಡ ದೊಡ್ಡ ಸಾಧನೆ ಮಾಡುತ್ತಾರೆ ಎಂದೇನೂ ಇಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾಗಿ ರಾಜೀನಾಮೆ ನೀಡಿ ಜೈಲಿಗೆ ಹೋದ ನಿದರ್ಶನಗಳೂ ಇಲ್ಲದಿಲ್ಲ.
ಒಟ್ಟಾರೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೊದಲ ಬಾರಿ ಶಾಸಕರಾದವರಿಗೆ ಸಚಿವರಾಗುವ ಯೋಗ ಇಲ್ಲ ಅಷ್ಟೇ.