ಖಠ್ಮಂಡು: ಭಾರತದ ಗಡಿ ಪ್ರದೇಶಗಳನ್ನು ತನ್ನ ನಕ್ಷೆಯಲ್ಲಿ ಸೇರಿಸಿಕೊಂಡು ವಿವಾದ ಸೃಷ್ಟಿಸಿದ್ದ ನೇಪಾಳ, ಇದೀಗ ಆ ನಕ್ಷೆಯನ್ನು ತನ್ನ ದೇಶದ 1 ರೂಪಾಯಿ ನಾಣ್ಯದಿಂದ ತೆಗೆದುಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದಿರುವ ನೇಪಾಳದ ರಾಷ್ಟ್ರೀಯ ಬ್ಯಾಂಕ್, ಚಲಾವಣೆಯಲ್ಲಿರುವ ನಾಣ್ಯದ ಮೇಲೆ ಈ ನಕ್ಷೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಎಂದು ಶನಿವಾರ ತಿಳಿಸಿದೆ.
ಏನಿದು ಗಡಿ ವಿವಾದ?
ಭಾರತದ ಉತ್ತರಾಖಂಡ ರಾಜ್ಯದ ಅವಿಭಾಜ್ಯ ಅಂಗಗಳಾಗಿರುವ ಲಿಂಪಿಯಾಧುರ, ಲಿಪುಲೇಖ್ ಮತ್ತು ಕಾಲಪಾನಿ ಪ್ರದೇಶಗಳು ತನಗೆ ಸೇರಿದ್ದು ಎಂದು ನೇಪಾಳ ಪ್ರತಿಪಾದಿಸುತ್ತಿದೆ. 2020ರ ಮೇ ತಿಂಗಳಲ್ಲಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ನೇಪಾಳ ಸರ್ಕಾರ, ಈ ಭಾರತೀಯ ಪ್ರದೇಶಗಳನ್ನು ಒಳಗೊಂಡ ಹೊಸ ಅಧಿಕೃತ ನಕ್ಷೆಗೆ ಅನುಮೋದನೆ ನೀಡಿ ನಾಣ್ಯದ ಮೇಲೆ ಮುದ್ರಿಸಲು ಆದೇಶಿಸಿತ್ತು. ಆದರೆ, ಈ ಪ್ರದೇಶಗಳು ತನಗೆ ಸೇರಿದವು ಹಾಗೂ ಈ ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ.
ಸರ್ಕಾರದ ಹಿಂಜರಿತಕ್ಕೆ ಕಾರಣವೇನು?
ನಾಣ್ಯದ ಮೇಲಿದ್ದ ಈ ವಿವಾದಾತ್ಮಕ ನಕ್ಷೆಯನ್ನು ಬದಲಾಯಿಸಲು ನೇಪಾಳ ಸರ್ಕಾರ ಜುಲೈ 20 ರಂದು ಒಪ್ಪಿಗೆ ನೀಡಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ದೇಶದ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಾರ್ವಜನಿಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಈ ಕುರಿತು ಮಾಹಿತಿ ನೀಡಿರುವ ನೇಪಾಳ ರಾಷ್ಟ್ರೀಯ ಬ್ಯಾಂಕ್ ವಕ್ತಾರ ಗುರು ಪ್ರಸಾದ್ ಪೌಡೆಲ್, "ನಾಣ್ಯದ ಹೊಸ ವಿನ್ಯಾಸ ಇನ್ನು ಬ್ಯಾಂಕ್ಗೆ ಅಧಿಕೃತವಾಗಿ ಸಿಕ್ಕಿಲ್ಲವಾದರೂ, ಅದರ ಮೇಲೆ ದೇಶದ ನಕ್ಷೆ ಇರುವುದು ಖಚಿತ. ಆದರೆ, ನಾಣ್ಯದ ಗಾತ್ರ ಮತ್ತು ತೂಕವನ್ನು ಮೊದಲಿಗಿಂತ ಹಗುರ ಹಾಗೂ ಚಿಕ್ಕದಾಗಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ.