ನವದೆಹಲಿ: ರಾಜ್ಯದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದ್ದು, ಈ ಸಂಬಂಧ ದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಹಾಗೂ ಸಮಗ್ರ ಮಾತುಕತೆ ನಡೆಸಿದರು. ಸಭೆಯಲ್ಲಿ ಮುಖ್ಯವಾಗಿ ಬಾಕಿ ಉಳಿದಿರುವ ಸಚಿವ ಸ್ಥಾನಗಳ ಭರ್ತಿ, ಹೊಸದಾಗಿ ಸಂಪುಟ ಸೇರಲಿರುವ ಶಾಸಕರಿಗೆ ಹಂಚಿಕೆ ಮಾಡಬೇಕಾದ ಪ್ರಮುಖ ಇಲಾಖೆಗಳು ಹಾಗೂ ಪ್ರಮಾಣವಚನ ಸ್ವೀಕಾರಕ್ಕೆ ಸೂಕ್ತ ದಿನಾಂಕವನ್ನು ನಿಗದಿಪಡಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ನೂತನ ಸಚಿವರ ಆಯ್ಕೆ ವೇಳೆ ಜಾತಿ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದ ಸಮತೋಲನ ಕಾಯ್ದುಕೊಳ್ಳುವ ಬಗ್ಗೆಯೂ ನಾಯಕರು ಗಮನ ಹರಿಸಿದ್ದಾರೆ. ಈ ಸಭೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಅಂತಿಮ ಸುತ್ತಿನ ಸಮಾಲೋಚನೆ ನಡೆಸಿ, ಸಚಿವರ ಅಂತಿಮ ಪಟ್ಟಿಗೆ ಅನುಮೋದನೆ ಪಡೆದು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.
ಆಗಸ್ಟ್ 6 ರಿಂದ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಹೊಸ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸಾಧ್ಯತೆ ದಟ್ಟವಾಗಿದೆ ಸಂಪುಟ ವಿಸ್ತರಣೆಯ ಬಳಿಕ ಉಂಟಾಗಬಹುದಾದ ಅಸಮಾಧಾನವನ್ನು ತಡೆಗಟ್ಟಲು, ಆಕಾಂಕ್ಷಿಗಳಿಗೆ ಪಕ್ಷದ ವರಿಷ್ಠರು ಈಗಾಗಲೇ ಖುದ್ದು ಸಮಾಲೋಚನೆ ನಡೆಸಿ, ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಯುತ್ತಿದ್ದು, ಪ್ರದೇಶವಾರು ಮತ್ತು ಜಾತಿವಾರು ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಅರ್ಹರನ್ನು ಆಯ್ಕೆ ಮಾಡುವ ಸವಾಲು ಹೈಕಮಾಂಡ್ ಮುಂದಿದೆ.
ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟವು ಜೂನ್ 3, 2026 ರಂದು ಅಧಿಕಾರ ಸ್ವೀಕರಿಸಿತು. ಪ್ರಸ್ತುತ 34 ಮಂದಿ ಸಚಿವರ ಪೈಕಿ 14 ಸ್ಥಾನಗಳು ಮಾತ್ರ ಭರ್ತಿಯಾಗಿದ್ದು, 20 ಸ್ಥಾನಗಳು ಖಾಲಿ ಇವೆ. ಈ ಬಾಕಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಪಕ್ಷವು ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ.