ಆಂಧ್ರಪ್ರದೇಶ: ಹಲವು ವರ್ಷಗಳಿಂದ ತಾಯಿಯಾಗುವ ಕನಸು ಕಂಡಿದ್ದ ಮಹಿಳೆಯೊಬ್ಬರು ಕೊನೆಗೂ ಗಂಡು ಮಗುವಿಗೆ ಜನ್ಮ ನೀಡಿದರು. ಆದರೆ ಆ ಸಂತೋಷವನ್ನು ಅನುಭವಿಸುವ ಮುನ್ನವೇ ಅವರು ಮೃತಪಟ್ಟ ದಾರುಣ ಘಟನೆ ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ನಡೆದಿದೆ. ಪ್ರಸವ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ವೈದ್ಯರು ಮುಂಚಿತವಾಗಿಯೇ ಎಚ್ಚರಿಸಿದ್ದರೂ, 'ನನ್ನ ಪ್ರಾಣಕ್ಕಿಂತ ಮಗುವಿನ ಪ್ರಾಣ ಮುಖ್ಯ' ಎಂದು ನಿರ್ಧರಿಸಿದ ತಾಯಿಯ ತ್ಯಾಗ ಎಲ್ಲರ ಕಣ್ಣೀರು ತರಿಸಿದೆ . ಮಾರ್ಕಾಪುರಂ ಜಿಲ್ಲೆಯ ಅರ್ಧವೀಡು ಮಂಡಲದ ಕಾಕರ್ಲ ಗ್ರಾಮ ನಿವಾಸಿ ಗುಂಟು ಲೀಲಮ್ಮ (40) ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕುಟುಂಬದ ಪರಿಸ್ಥಿತಿಯಿಂದ ತಡವಾಗಿ ವಿವಾಹವಾಗಿದ್ದ ಅವರು 2018ರಲ್ಲಿ ಮದುವೆಯಾಗಿದ್ದರು. ಹಲವು ವರ್ಷಗಳ ಕಾಲ ಸಂತಾನ ಭಾಗ್ಯ ಇಲ್ಲದ ಕಾರಣ ದಂಪತಿ ನೋವಿನಲ್ಲಿ ಬದುಕುತ್ತಿದ್ದರು. ಆದರೆ ಇತ್ತೀಚೆಗೆ ಲೀಲಮ್ಮ ಗರ್ಭಿಣಿಯಾಗಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು.
ಗರ್ಭಧಾರಣೆಯಾದ ಕೆಲವೇ ದಿನಗಳಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಲೀಲಮ್ಮ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಪತ್ತೆಯಾಯಿತು. ಈ ಪರಿಸ್ಥಿತಿಯಲ್ಲಿ ಗರ್ಭ ಮುಂದುವರಿಸುವುದು ಅಪಾಯಕಾರಿ ಎಂದು ವೈದ್ಯರು ಸಲಹೆ ನೀಡಿದ್ದರು. ನಂತರ ಅವರಿಗೆ ವಿಶೇಷ ಚಿಕಿತ್ಸೆ ನೀಡಿ ಹೃದಯಕ್ಕೆ ಸ್ಟೆಂಟ್ ಅಳವಡಿಸಲಾಗಿತ್ತು. ಇದರಿಂದ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದರೂ, ಗರ್ಭಧಾರಣೆಯ ಕೊನೆಯ ಹಂತದಲ್ಲಿ ಅವರ ಆರೋಗ್ಯ ಮತ್ತೆ ಹದಗೆಟ್ಟಿತು. ತುರ್ತು ಪರಿಸ್ಥಿತಿಯಲ್ಲಿ ಅವರನ್ನು ತಿರುಪತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸವದ ವೇಳೆ ತಾಯಿ ಅಥವಾ ಮಗುವಿನಲ್ಲಿ ಒಬ್ಬರನ್ನು ಮಾತ್ರ ಉಳಿಸಬಹುದಾದ ಸಾಧ್ಯತೆ ಇದೆ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದರು. ಆದರೂ, ತನ್ನ ಮಗುವನ್ನು ಸುರಕ್ಷಿತವಾಗಿ ಈ ಲೋಕಕ್ಕೆ ತರಬೇಕೆಂಬ ದೃಢ ನಿರ್ಧಾರದಿಂದ ಲೀಲಮ್ಮ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಒಪ್ಪಿದರು.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದು ಅವರಿಗೆ ಗಂಡು ಮಗು ಜನಿಸಿತು. ಆದರೆ ಪ್ರಸವದ ಬಳಿಕ ಲೀಲಮ್ಮ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಅವರು ಕೊನೆಯುಸಿರೆಳೆದರು. ತಾವು ಜನ್ಮ ನೀಡಿದ ಮಗುವನ್ನು ಒಮ್ಮೆಯಾದರೂ ನೋಡಲು ಸಾಧ್ಯವಾಗದೆ ಅವರು ಸಾವನ್ನಪ್ಪಿರುವುದು ಕುಟುಂಬದವರನ್ನು ಕಂಬನಿಗೊಳಿಸಿದೆ. ಲೀಲಮ್ಮ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗಿದ್ದು, ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಆಶಾ ಕಾರ್ಯಕರ್ತೆಯಾಗಿ ಜನಸೇವೆ ಸಲ್ಲಿಸಿದ್ದ ಲೀಲಮ್ಮ ಅವರ ನಿಧನಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಸಂತಾಪ ಸೂಚಿಸಿ, ಅವರ ಸೇವೆಯನ್ನು ಸ್ಮರಿಸಿದರು.