ಮೈಸೂರು: ಕೊಟ್ಟ ಸಾಲವನ್ನು ಹಿಂತಿರುಗಿಸುವಂತೆ ಕೇಳಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಇಲ್ಲಿ ಜಲದರ್ಶಿನಿಯಲ್ಲಿ ವಿಶ್ವನಾಥ್ ಅವರು ಉಳಿದುಕೊMಡಿದ್ದಾಗ ಸಾಲವನ್ನು ಮರಳಿಸುವಂತೆ ಕೇಳಿದಾಗ ವಿಶ್ವನಾಥ್ ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು ಎಂದು ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ದೂರು ದಾಖಲಿಸಿದ್ದರು.
2013 ರಲ್ಲಿ ವಿಶ್ವನಾಥ್ ರವರು ಲೋಕಸಭಾ ಸದಸ್ಯರಾಗಿದ್ದಾಗ ಎಂಟಿಬಿ ನಾಗರಾಜ್ ಮೂಲಕ ವಿಶ್ವನಾಥ್ ಹಾಗೂ ಅವರ ಪುತ್ರ ಅಮಿತ್ ದೇವರಹಟ್ಟಿ ಅವರಿಗೆ ರೂ.55 ಲಕ್ಷ ನೀಡಿದ್ದೆ. ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿ ಮಹದೇವು ದೇವರಾಜ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಿಸಿದರು. ನಂತರ ನ್ಯಾಯಾಲಯದ ಮೊರೆಹೋಗಿ ಪ್ರಕರಣ ದಾಖಲಿಸುವಂತೆ ಆದೇಶ ತಂದಿದ್ದಾರೆ. ಹಾಗಾಗಿ ಇದೀಗ ವಿಶ್ವನಾಥ್ ವಿರುದ್ದ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.