ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಮೈಸೂರಿನ ನಂಜುಂಡೇಶ್ವರ ದೇವಸ್ಥಾನ ದಾಸೋಹ ಭವನದ ಪ್ರವೇಶದ್ವಾರದ ಸಮೀಪ ಮಾಂಸಾಹಾರ ಸೇವನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರದೀಪ್ ಎಂಬ ವ್ಯಾಪಾರಿ ದೇವಸ್ಥಾನ ಆವರಣದ ಸಮೀಪವೇ ಮಾಂಸಾಹಾರ ಸೇವಿಸುತ್ತಿದ್ದಾನೆ ಎಂದು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣ ಹಸ್ತಕ್ಷೇಪ ಮಾಡಿದ್ದಾರೆ. ದೇವಸ್ಥಾನದ ನಿಯಮಾವಳಿಗಳ ಪ್ರಕಾರ ಪವಿತ್ರ ಪ್ರದೇಶದ ಒಳಗೆ ಅಥವಾ ಸಮೀಪ ಮಾಂಸಾಹಾರ ಸೇವನೆಗೆ ಅವಕಾಶವಿಲ್ಲ ಎಂದು ತಿಳಿಸಿ, ಆತನನ್ನು ಎಚ್ಚರಿಸಿದ್ದಾರೆ.
ಈ ಸಂದರ್ಭ ನಡೆದ ವಾಗ್ವಾದದ ದೃಶ್ಯಗಳನ್ನು ಯಾರೋ ಚಿತ್ರೀಕರಿಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಕುರಿತು ದೇವಸ್ಥಾನ ಆಡಳಿತದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಹೂವಿನ ವ್ಯಾಪಾರಿಯನ್ನು ಭದ್ರತಾ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ