ಬೆಂಗಳೂರು: ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳೇ ಹೊರತು ಬೀದಿ ನಾಯಿಗಳಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಮಹದೇವಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಸಚಿವ ಮಹದೇವಪ್ಪ ಅವರು ಯಾವ ಅರ್ಥದಲ್ಲಿ, ಯಾರನ್ನು ಕುರಿತು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಮನ್ನು ಕಾಪಾಡುತ್ತದೆ ಎಂಬ ಕಾರಣಕ್ಕೆ ನಾಯಿ ಸಾಕುತ್ತೇವೆ. ಆ ಬಗ್ಗೆ ಹೆಚ್ಚು ವ್ಯಾಖ್ಯಾನ ಬೇಕಿಲ್ಲ ಬಿಡಿ ಎಂದರು.
ಶಾಸಕರ ವಿದೇಶಿ ಪ್ರವಾಸ ಕುರಿತು ವಿಶೇಷ ವ್ಯಾಖ್ಯಾನ ಬೇಕಿಲ್ಲ. ಕೆಲವರು ಅಧ್ಯಯನಕ್ಕೆ, ಇನ್ನೂ ಕೆಲವರು ದೇಶ ನೋಡಲು ಮತ್ತೆ ಕೆಲವರು ಸಂತೋಷ ಅನುಭವಿಸಲು ವಿದೇಶಿ ಪ್ರವಾಸಕ್ಕೆ ಹೋಗುತ್ತಾರೆ ಎಂದರು.
ನಂದಿನಿ ಉತ್ಪನ್ನಗಳ ವಿರುದ್ಧ ಕೆಲವು ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಹಾಲು ಒಕ್ಕೂಟದ ಸಭೆ ಕರೆದು ಅಂತ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ನಂದಿನಿ ಮೊದಲಿನಿಂದಲೂ ಗುಣಮಟ್ಟಕ್ಕೆ ನಂದಿನಿ ಹೆಸರುವಾಸಿಯಾಗಿದೆ. ಗ್ರಾಹಕರು ಮತ್ತು ಉತ್ಪಾದಕರಿಗೆ ಯಾವತ್ತೂ ಅನ್ಯಾಯ ಮಾಡಿಲ್ಲ. ಉದ್ಯಮದ ಪ್ರತಿಸ್ಪರ್ಧಿಗಳು ಈ ರೀತಿ ಅಪಪ್ರಚಾರ ಮಾಡಿರಬಹುದು ಎಂದರು.