ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಡಿ ಎಂಬ ಪದ ಬಳಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಪಡಿಸಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಮುಖ್ಯಮಂತ್ರಿಗಳಿಗೆ ಪಶ್ಚಾತ್ತಾಪ ಆಗಿದ್ದರೆ ಅವರು ಕೂಡಲೇ ದೇಶದ ಜನತೆಯ ಕ್ಷಮೆ ಕೇಳಬೇಕು. ಮುಖ್ಯಮಂತ್ರಿಯವರು ತಾಳ್ಮೆ ಕಳೆದುಕೊಂಡು ಮಾತನಾಡುತ್ತಿದ್ದಾರಾ ಅಥವಾ ರಾಹುಲ್ ಗಾಂಧಿ ಓಲೈಕೆಗಾಗಿ ಹೀಗೆ ಮಾತನಾಡುತ್ತಾರಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಪದವಿಯಲ್ಲಿ ಇನ್ನೂ ಸ್ವಲ್ಪದಿನ ಉಳಿದುಕೊಳ್ಳಲು ಹೀಗೆ ಮಾತಾಡಿದ್ದಾರಾ? ಅಥವಾ ತಲೆ ಕೆಟ್ಟು ಇಂಥ ಪದ ಬಳಸುತ್ತಿದ್ದಾರಾ? ಎಂದು ಕೇಳಿ ಅವರಿಗೆ ಪರೀಕ್ಷೆ ಮಾಡಿಸುವ ಅವಶ್ಯಕತೆ ಇದೆ ಎಂದರು.
ಸದನ ನಡೆಸಿ ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ ಮಾಡಿದ್ದಾರೆ. ವಿಬಿ ಜಿ ರಾಮ್ ಜಿ ವಿರೋಧಿಸುವ ಕೆಲಸ ಮಾತ್ರ ಮಾಡಿದ್ದಾರೆ. ಜನರ ಸಮಸ್ಯೆ ಚರ್ಚೆ ಆಗಿಲ್ಲ ಎಂದು ಟೀಕಿಸಿದರು. ನಿಮ್ಮ ಖಜಾನೆ ಖಾಲಿ ಆಗಿದೆ. ಯುವಜನರ ಬಗ್ಗೆ ನಿಮಗೆ ಪ್ರೀತಿ ಪ್ರೇಮ ಇಲ್ಲ. ಅವರ ಭವಿಷ್ಯದ ಕುರಿತು ಕಾಳಜಿ ಇಲ್ಲ. ಅದನ್ನು ತುಂಬುವ ಬದಲು ನೀವು ಸಂತೆಭಾಷಣ ಮಾಡುವುದೇಕೆ? ಎಂದು ಕೇಳಿದರು. ಬದ್ಧತೆ ಇದ್ದರೆ ಕೇಂದ್ರದ ಬಳಿಗೆ ತೆರಳಿ ಮಾತನಾಡಬೇಕು. ಕೇವಲ ಪತ್ರ ಬರೆದು ಕುಳಿತರೆ ಆಗದು ಎಂದು ತಿಳಿಸಿದರು.