ರಾಮನಗರ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ನಾಳೆ ಭೇಟಿ ನೀಡಲಿದ್ದಾರೆ. ಅವರು ದಿನವಿಡೀ ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರಿಗೆ ಕೃತಜ್ಞತೆಗಳನ್ನು ಸಮರ್ಪಿಸಲಿದ್ದಾರೆ.
ಮನೆ ಮಗನನ್ನು ಸ್ವಾಗತಿಸಲು ಕನಕಪುರ ಹಾಗೂ ಹಾರೋಹಳ್ಳಿ ತಾಲೂಕಿನ ನಾಗರೀಕರು ಮತ್ತು ಕಾರ್ಯಕರ್ತರು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಬೃಹತ್ ರೋಡ್ ಶೋ ಮೂಲಕ ಕ್ಷೇತ್ರದ ಪ್ರತಿ ಗ್ರಾಮವನ್ನೂ ಡಿಕೆ ಶಿವಕುಮಾರ್ ತಲುಪಲಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಬೆಳಗ್ಗೆ 10 ಗಂಟೆಗೆ ರಸ್ತೆ ಮಾರ್ಗವಾಗಿ ಹಾರೋಹಳ್ಳಿಗೆ ಆಗಮಿಸಲಿದ್ದು, ಜನಪದ ಕಲಾ ತಂಡಗಳ ಭವ್ಯ ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಹಾಗೂ ಅದ್ಧೂರಿ ಸ್ವಾಗತ ಕೋರಲಾಗುತ್ತದೆ. ನಂತರ ಅಲ್ಲಿನ ಪ್ರಸಿದ್ಧ ಕೋಟೆ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಪೂಜೆಯ ನಂತರ, ತೆರೆದ ವಾಹನದಲ್ಲಿ ಹಾರೋಹಳ್ಳಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಹಾರೋಹಳ್ಳಿ ಬಸ್ ನಿಲ್ದಾಣದ ವೃತ್ತದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೃತಜ್ಞತಾ ಭಾಷಣ ಮಾಡಲಿದ್ದಾರೆ.
ಅದೇ ರೀತಿ ಕನಕಪುರ ತಾಲೂಕಿನ ತುಂಗಣಿ, ಟಿ.ಬೇಕುಪ್ಪೆ ಸರ್ಕಲ್, ನಾರಾಯಣಪುರ, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ ಮತ್ತು ಹುಣಸನಹಳ್ಳಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ ಹೂಕುಂದ, ಮುಳ್ಳಹಳ್ಳಿ, ನಲ್ಲಹಳ್ಳಿ, ದೊಡ್ಡ ಆಲಹಳ್ಳಿ, ಸಾತನೂರು, ಕಬ್ಬಾಳು, ಕುರುಬರಹಳ್ಳಿ ಗೇಟ್ ಮತ್ತು ಸೋಮದ್ಯಾಪನಹಳ್ಳಿಗೆ ತೆರಳಲಿದ್ದಾರೆ.
ಸಂಜೆ 7 ಗಂಟೆಗೆ ರೋಡ್ ಶೋ ಹಳ್ಳಿಮಾರನಹಳ್ಳಿ ತಲುಪಲಿದೆ. ನಂತರ ಅಲ್ಲಿಂದ ಹಳೆ ಪೊಲೀಸ್ ಸ್ಟೇಷನ್ ಸರ್ಕಲ್, ಮೇಗಳ ಬೀದಿ ಮುಖಾಂತರ ಕನಕಪುರ ಟೌನ್ ತಲುಪಲಿದೆ. ಕನಕಪುರ ಪಟ್ಟಣದ ಚನ್ನಬಸಪ್ಪ ಸರ್ಕಲ್ನಲ್ಲಿ ಮತ್ತೊಂದು ಸಮಾವೇಶ ನಡೆಯಲಿದೆ.