2026-07-26 01:44:11

Actress Dipika Chikhlia | ರಾಮಾಯಣದ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವೇ? ಹಿರಿಯ ನಟಿ ದೀಪಿಕಾ ಚಿಕ್ಲಿಯಾ ನೀಡಿದ ಹೇಳಿಕೆ ಇಲ್ಲಿದೆ | SNK

Actress Dipika Chikhlia | ರಾಮಾಯಣದ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವೇ? ಹಿರಿಯ ನಟಿ ದೀಪಿಕಾ ಚಿಕ್ಲಿಯಾ ನೀಡಿದ ಹೇಳಿಕೆ ಇಲ್ಲಿದೆ | SNK

ಚಿತ್ರನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ರಾಮಾಯಣ' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ದಿಕ್ಪಟ ಚಿತ್ರದ ಕುರಿತು ಈಗಾಗಲೇ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ವ್ಯಕ್ತವಾಗಿದೆ. ಆದರೆ, ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದು ಅಭಿಮಾನಿಗಳಲ್ಲಿ ಮತ್ತು ಚಿತ್ರಪ್ರೇಮಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ, ರಾಮಾನಂದ್ ಸಾಗರ್ ಅವರ ಪ್ರಸಿದ್ಧ ‘ರಾಮಾಯಣ’ ಧಾರಾವಾಹಿಯಲ್ಲಿ ಸೀತೆಯ ಪಾತ್ರದ ಮೂಲಕ ಜನರ ಮನಸ್ಸಿನಲ್ಲಿ ಅಮರರಾಗಿರುವ ಹಿರಿಯ ನಟಿ ದೀಪಿಕಾ ಚಿಕ್ಲಿಯಾ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ದೀಪಿಕಾ, ಸಾಯಿ ಪಲ್ಲವಿ ಅವರ ಅಭಿನಯ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಆದರೆ, ಸೀತೆಯ ಪಾತ್ರಕ್ಕೆ ಅವರು ದೃಶ್ಯ ರೂಪದಲ್ಲಿ ಎಷ್ಟು ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. “ನಾನು ಸಾಯಿ ಪಲ್ಲವಿ ಅವರ ಅಭಿನಯವನ್ನು ನೋಡಿದ್ದೇನೆ, ಅವರು ಅತ್ಯುತ್ತಮ ನಟಿ. ಆದರೆ ಸೀತೆಯ ಪಾತ್ರದಲ್ಲಿ ಅವರು ಹೇಗೆ ಕಾಣಿಸುತ್ತಾರೆ ಎಂಬುದು ನನಗಿನ್ನೂ ತಿಳಿದಿಲ್ಲ. ತೆರೆಯ ಮೇಲೆ ಅವರನ್ನು ನೋಡಿದ ಮೇಲಷ್ಟೇ ಈ ಬಗ್ಗೆ ಒಂದು ಸ್ಪಷ್ಟತೆ ಸಿಗಲಿದೆ. ತುಳಸಿದಾಸರ ರಾಮಾಯಣದಲ್ಲಿ ಸೀತೆಯ ರೂಪ, ಕಣ್ಣುಗಳು, ಎತ್ತರ ಹಾಗೂ ಕೂದಲಿನ ಬಗ್ಗೆ ನಿರ್ದಿಷ್ಟ ವಿವರಣೆಯಿದೆ. ರಾಮಾನಂದ್ ಸಾಗರ್ ಅವರು ಅಂತಹ ಲಕ್ಷಣಗಳನ್ನೇ ಹುಡುಕುತ್ತಿದ್ದರು ಮತ್ತು ಅದನ್ನು ನನ್ನಲ್ಲಿ ಕಂಡುಕೊಂಡಿದ್ದರು. ಚಿತ್ರದಲ್ಲಿ ನಟಿಸುತ್ತಿರುವವರೆಲ್ಲರೂ ಉತ್ತಮ ನಟರು, ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೊಂಡರೆ ಒಳ್ಳೆಯದೇ” ಎಂದು ದೀಪಿಕಾ ತಿಳಿಸಿದ್ದಾರೆ. ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ದೀಪಿಕಾ, ಸೀತೆಯ ಪಾತ್ರವೇ ತಮ್ಮ ಜೀವನದ ಶಾಶ್ವತ ಗುರುತಾಗಿದೆ ಎಂದಿದ್ದಾರೆ. “ಕೆಲವೊಮ್ಮೆ ಜನರು ನನ್ನ ನಿಜವಾದ ಹೆಸರನ್ನು ಮರೆತರೂ ಸೀತೆಯ ಪಾತ್ರವನ್ನು ನೆನಪಿಟ್ಟುಕೊಳ್ಳುತ್ತಾರೆ. ಪ್ರತಿಯೊಬ್ಬ ನಟನಿಗೂ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ ಇರುತ್ತದೆ, ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗಲು ಯಾರೂ ಬಯಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇದರ ಜೊತೆಗೆ, 1987ರ ಪ್ರಸಿದ್ಧ ಧಾರಾವಾಹಿಯ ಪ್ರಭಾವವು ಮುಂಬರುವ ಹೊಸ ಸಿನಿಮಾದ ಮೇಲೂ ಇರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಪ್ರಸಾರವಾದಾಗ ಹೊಸ ತಲೆಮಾರಿನ ಜನರೂ ಸಹ ಹಳೆಯ ರಾಮಾಯಣವನ್ನು ವೀಕ್ಷಿಸಿದ್ದಾರೆ. ಹೀಗಾಗಿ ಆ ಬಿಂಬವನ್ನು ಜನರ ಮನಸ್ಸಿನಿಂದ ಅಳಿಸಿಹಾಕುವುದು ಸುಲಭವಲ್ಲ ಎಂದು ದೀಪಿಕಾ ಹೇಳಿದ್ದಾರೆ. ಬೃಹತ್ ಬಜೆಟ್‌ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿರುವ ನಿತೇಶ್ ತಿವಾರಿ ಅವರ ಈ ‘ರಾಮಾಯಣ’ ಭಾರತೀಯ ಚಿತ್ರರಂಗದ ಅತಿದೊಡ್ಡ ಸಾಹಸಗಳಲ್ಲಿ ಒಂದಾಗಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.