ಪಾಟ್ನಾ: ಬಿಹಾರದ ಮಹಾಘಟಬಂಧನ ರಾಜಕೀಯದಲ್ಲಿ ಭದ್ರತೆಯ ವಿಚಾರವಾಗಿ ಭಾರಿ ತಲ್ಲಣ ಸೃಷ್ಟಿಯಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್ಜೆಡಿ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ಉನ್ನತ ಮಟ್ಟದ 'ಝಡ್ ಪ್ಲಸ್' (Z+) ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಲಾಲು ಯಾದವ್, "ನಾನು ಬಿಹಾರದ ಸಿಂಹ. ನನ್ನನ್ನು ಯಾರೇ ಟಾರ್ಗೆಟ್ ಮಾಡಲಿ, ನನಗೆ ಯಾವುದೇ ಆತಂಕವಿಲ್ಲ" ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಪ್ರಸ್ತುತ ಸರ್ಕಾರವು ಇತ್ತೀಚೆಗೆ ಮಹತ್ವದ ಆದೇಶ ಹೊರಡಿಸಿ, ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ಡಿ ದೇವಿ ಅವರಿಗೆ ಇದ್ದ 'ಝಡ್ ಪ್ಲಸ್' ಶ್ರೇಣಿಯ ಸುರಕ್ಷತೆಯನ್ನು ರದ್ದುಗೊಳಿಸಿದೆ. ಇದರ ಬದಲಾಗಿ ಇಬ್ಬರು ಹಿರಿಯ ನಾಯಕರಿಗೆ 'ಬಿಹಾರ ವಿಶೇಷ ಸಶಸ್ತ್ರ ಪೊಲೀಸ್' (BSAP) ಗಾರ್ಡ್ಗಳನ್ನು ಕಾವಲಿಗೆ ನಿಯೋಜಿಸಿದೆ. ಸರ್ಕಾರದ ಈ ರಾಜಕೀಯ ನಡೆಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಲಾಲು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದ್ದಾರೆ.
ಭೋಜ್ಪುರ ಎನ್ಕೌಂಟರ್ ವಿವಾದ: ನಿತೀಶ್ ಕುಮಾರ್ ಜೆಡಿಯು ಪಕ್ಷದಲ್ಲಿ ಭಿನ್ನಾಭಿಪ್ರಾಯ ಸ್ಫೋಟ!
ಇನ್ನೊಂದೆಡೆ, ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು (JDU) ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಬೀದಿಗೆ ಬಂದಿವೆ. ಕಳೆದ ತಿಂಗಳು ಭೋಜ್ಪುರ ಜಿಲ್ಲೆಯಲ್ಲಿ ಭರತ್ ಭೂಷಣ್ ತಿವಾರಿ ಎಂಬ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಪ್ರಭಾವಿ ಸಚಿವರ ನಡುವೆ ಶೀತಲ ಸಮರ ಆರಂಭವಾಗಿದೆ. ಜೆಡಿಯುನ ಹಿರಿಯ ನಾಯಕ ಮತ್ತು ಸಚಿವ ಅಶೋಕ್ ಚೌಧರಿ ಅವರು ಬಿಲೌತಿ ಗ್ರಾಮದಲ್ಲಿರುವ ಸಂತ್ರಸ್ತ ಯುವಕನ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದರು. ಆದರೆ ಇದರ ಬೆನ್ನಲ್ಲೇ ಮತ್ತೊಬ್ಬ ಹಿರಿಯ ಜೆಡಿಯು ನಾಯಕ ಮತ್ತು ಸಚಿವ ಶ್ರವಣ್ ಕುಮಾರ್ ಅವರು, "ಅಶೋಕ್ ಚೌಧರಿ ಅವರ ಹೇಳಿಕೆಗೂ ಜೆಡಿಯು ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಸಂತ್ರಸ್ತ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಅವರ ಮಾತುಗಳು ಪಕ್ಷದ ಅಧಿಕೃತ ನಿಲುವಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವರ ಈ ಪರಸ್ಪರ ಹೇಳಿಕೆಗಳು ಬಿಹಾರ ರಾಜಕಾರಣದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಉನ್ನತ ಶಿಕ್ಷಣಕ್ಕೆ ಹೊಸ ಟಚ್: ಬಿಹಾರದಲ್ಲಿ 'ಕಲೆ ಮತ್ತು ಸಂಸ್ಕೃತಿ ವಿವಿ' ಸ್ಥಾಪನೆಗೆ ಭರ್ಜರಿ ಸಿದ್ಧತೆ ರಾಜಕೀಯ ಮೇಲಾಟಗಳ ನಡುವೆಯೂ ಬಿಹಾರದಲ್ಲಿ ಉನ್ನತ ಶಿಕ್ಷಣದ ಸ್ವರೂಪ ವೇಗವಾಗಿ ಬದಲಾಗುತ್ತಿದೆ. ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಕ್ರೀಡಾ ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರವು ಈಗ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು ಉತ್ತೇಜಿಸಲು 'ಪ್ರತ್ಯೇಕ ಬಿಹಾರ ಕಲಾ ವಿಶ್ವವಿದ್ಯಾಲಯ' ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ಬಿಹಾರದ ಕಲೆ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಈ ನೂತನ ವಿಶ್ವವಿದ್ಯಾಲಯದ ನೀಲನಕ್ಷೆ (ಚೌಕಟ್ಟು) ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿವೆ. ಈ ವಿಶೇಷ ವಿಶ್ವವಿದ್ಯಾಲಯದಲ್ಲಿ ಸಂಗೀತ, ನೃತ್ಯ, ನಾಟಕ ಮತ್ತು ಜಾನಪದ ಕಲೆಯಂತಹ ಸಾಂಪ್ರದಾಯಿಕ ಹಾಗೂ ಆಧುನಿಕ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ವಿಶೇಷ ಶಿಕ್ಷಣವನ್ನು ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.