ಬೆಂಗಳೂರಿನ ಮಹಾನಗರ ರಾಜಕೀಯದಲ್ಲಿ ಈಗಿನಿಂದಲೇ ಚುನಾವಣಾ ರಂಗು ಜೋರಾಗತೊಡಗಿದೆ. ಯಾವುದೇ ಕ್ಷಣದಲ್ಲಾದರೂ ಗ್ರೇಟರ್ ಬೆಂಗಳೂರು ಪಾಲಿಕೆ (GBA) ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ಮುಖಂಡರು ಸದ್ದಿಲ್ಲದೆ ಗ್ರೌಂಡ್ ವರ್ಕ್ ಆರಂಭಿಸಬೇಕಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಜೆಡಿಎಸ್ (JDS) ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನಗೆ ಬೇಕಾದಂತೆ ಇಷ್ಟು ದಿನ ಎಲೆಕ್ಷನ್ ಮುಂದೂಡುತ್ತಾ ಬಂದಿದೆ. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ, ಹಾಗಾಗಿ ದಿನಾಂಕ ಯಾವಾಗ ಬೇಕಿದ್ದರೂ ಪ್ರಕಟವಾಗಬಹುದು ಎಂದರು. ಇದೇ ವೇಳೆ ಟಿಕೆಟ್ ಆಕಾಂಕ್ಷಿಗಳಿಗೆ ನೇರವಾಗಿಯೇ ಕಿವಿಮಾತು ಹೇಳಿದ ಎಚ್ಡಿಕೆ, "ಸುಮ್ಮನೆ ಕೈಕಟ್ಟಿಕುಳಿತು ಟಿಕೆಟ್ ಬೇಕು ಎಂದರೆ ಸಿಗಲ್ಲ. ಮೊದಲು ನಿಮ್ಮ ನಿಮ್ಮ ವಾರ್ಡ್ಗಳಲ್ಲಿ ಪಕ್ಷದ ಪರಿಸ್ಥಿತಿ ಏನಿದೆ ಎಂಬುದನ್ನು ಅರಿತುಕೊಳ್ಳಿ. ಜೆಡಿಎಸ್ನ ಯೋಜನೆಗಳು ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪುವಂತೆ ಕೆಲಸ ಮಾಡಿ" ಎಂದು ಕ್ಲಾಸ್ ತಗೆದುಕೊಂಡರು.
ಅಲ್ಲದೆ, ಪ್ರಧಾನಿ ಮೋದಿ ಹಾಗೂ ದೇವೇಗೌಡರ ಆಶಯದಂತೆ ಈ ಬಾರಿ ಪಾಲಿಕೆ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಸೀಟು ಕೊಡಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಮುಂಬರುವ ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವೇ ಬೆಂಗಳೂರಿನ ಅಧಿಕಾರ ಹಿಡಿಯುವುದು ಗ್ಯಾರಂಟಿ ಎಂದ ಕುಮಾರಸ್ವಾಮಿ, ಕಾಂಗ್ರೆಸ್ ಅನ್ನು ಸೋಲಿಸಲು ಉಭಯ ಪಕ್ಷಗಳು ಒಟ್ಟಾಗಿ ಶ್ರಮಿಸಬೇಕಿದೆ ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಬೆಂಗಳೂರಿನಲ್ಲಿ ನಡೆಯುತ್ತಿರುವ ವೋಟರ್ ಐಡಿ ಪರಿಷ್ಕರಣೆಯಲ್ಲಿ ಆಡಳಿತ ಪಕ್ಷ ತನ್ನ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದಕ್ಕಾಗಿಯೇ, ನಮ್ಮ ಕಾರ್ಯಕರ್ತರು ಅಲರ್ಟ್ ಆಗಿದ್ದು ಎಲ್ಲೂ ಅಕ್ರಮ ಮತಗಳು ಸೇರ್ಪಡೆಯಾಗದಂತೆ ಕಣ್ಣಿಡಬೇಕು ಎಂದು ಅವರು ಕಟ್ಟುನಿಟ್ಟಿನ ಆರ್ಡರ್ ಮಾಡಿದ್ದಾರೆ.