ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಎದ್ದಿರುವ ಗೊಂದಲಗಳನ್ನು ಪರಿಹರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಸಮಯ ಕೊಟ್ಟ ಕೂಡಲೇ ದೆಹಲಿಗೆ (Delhi) ತೆರಳುವುದಾಗಿ ಹೇಳಿದ್ದಾರೆ. ಸದ್ಯ ಹಿರಿಯ ಸಚಿವರಿಂದ ಕೇಳಿಬರುತ್ತಿರುವ ಅಸಮಾಧಾನ ಹಾಗೂ ಕೆಲ ನಿರ್ದಿಷ್ಟ ಇಲಾಖೆಗಳ ಹಂಚಿಕೆಗಾಗಿ ನಡೆಯುತ್ತಿರುವ ಲಾಬಿಗಳ ಕುರಿತು ಚರ್ಚಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.ರಾಜ್ಯದ ಸಿಎಂ ಆಗಿ ಡಿಕೆ ಪದಗ್ರಹಣದ ಬಳಿಕ ರಾಜ್ಯದ ನಾಯಕರಲ್ಲಿ ಸಂಪುಟ ವಿಸ್ತರಣೆಯ ಕುರಿತು ಉಂಟಾಗಿರುವ ಆಂತರಿಕ ಬಿಕ್ಕಟ್ಟು ಮತ್ತು ಖಾತೆಗಳ ಹಂಚಿಕೆಯ ಕಗ್ಗಂಟನ್ನು ಹೈಕಮಾಂಡ್ ನಾಯಕರ ಜೊತೆ ನೇರವಾಗಿ ಚರ್ಚಿಸಿ ಬಗೆಹರಿಸಲು ಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ಬಾರಿಯ ಸಂಪುಟ ವಿಸ್ತರಣೆಯ ವೇಳೆ ಹಳೆಯ ಮತ್ತು ಹೊಸ ಮುಖಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು, ತಮ್ಮ ಬಣ ಹಾಗೂ ಸಿದ್ದು ಬಣದ ನಾಯಕರನ್ನು ಸಮಾಧಾನ ಪಡಿಸುವುದು ಸಿಎಂ ಗೆ ದೊಡ್ಡ ಸವಾಲಾಗಿದ್ದು, ದೆಹಲಿ ಮಟ್ಟದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಸಭೆಗಳು ಮುಂದಿನ ರಾಜಕೀಯ ನಡೆಗೆ ಅತ್ಯಂತ ನಿರ್ಣಾಯಕವಾಗಿವೆ. ಶೀಘ್ರದಲ್ಲೇ ಈ ಅಸಮಾಧಾನ ತಣ್ಣಗಾಗಿಸುವ ನಿಟ್ಟಿನಲ್ಲಿ ಹೈಕಮಾಂಡ್ನಿಂದ ಮಹತ್ವದ ಸಂದೇಶ ಸಿಗುವ ನಿರೀಕ್ಷೆಯಿದೆ.