ಬೆಂಗಳೂರು: ಮನೆಯ ಹಿಂಬಾಗಿಲಿನ ಚಿಲಕ ಮುರಿದು ಮನೆಯೊಳಗೆ ನುಗ್ಗಿ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ 50 ಲಕ್ಷ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ನಿವಾಸಿ ಮಹೇಶ್ಗೌಡ ಬಂಧಿತ ಆರೋಪಿ. ಈತನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚುಂಚಘಟ್ಟ ಮುಖ್ಯ ರಸ್ತೆಯ ಮೈಸೂರು ಬ್ಯಾಂಕ್ ಕಾಲೋನಿ ನಿವಾಸಿ ರೇಖಾ ಎಂಬುವವರು ಕುಟುಂಬ ಸಮೇತ ಹೊರ ಹೋಗಿದ್ದಾಗ ಕಳ್ಳರು ಮನೆಯ ಹಿಂಬಾಗಿಲಿನ ಚಿಲಕವನ್ನು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನ, ವಜ್ರಾಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದರು.
ರೇಖಾ ಅವರ ಸಂಬಂಧಿಯೊಬ್ಬರು ಈ ವಿಷಯವನ್ನು ರೇಖಾ ಅವರ ಗಮನಕ್ಕೆ ತಂದಿದ್ದಾರೆ. ರೇಖಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮದ್ದೂರು ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಆತ ಕಳವು ಮಾಡಿದ ಆಭರಣಗಳ ಪೈಕಿ ಕೆಲವನ್ನು ಮದ್ದೂರಿನ ಜ್ಯೂವೆಲರಿ ಅಂಗಡಿಗಳಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದಾನೆ. ಇನ್ನೂ ಕೆಲವು ಆಭರಣಗಳನ್ನು ಮಾರಾಟ ಮಾಡಿದ್ದಾನೆ. ಈತನ ಮಾಹಿತಿಯಂತೆ ಜ್ಯೂವೆಲರಿ ಅಂಗಡಿಗಳಿಂದ ಒಟ್ಟು 50 ಲಕ್ಷ ಮೌಲ್ಯದ 318 ಗ್ರಾಂ ಚಿನ್ನ, ವಜ್ರಾಭರಣಗಳು, 2 ಕೆಜಿ 435 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಹೊರರಾಜ್ಯದ ಮೂವರನ್ನು ಕೆಆರ್ಪುರ ಠಾಣೆ ಪೊಲೀಸರು ಬಂಧಿಸಿ ರೂ.40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಗೋಪಾಲ್ (29), ಕೈಲಾಶ್ (30) ಮತ್ತು ಉತ್ತರ ಪ್ರದೇಶದ ನಾಗೇಂದ್ರ ಸಹನಿ (36) ಬಂಧಿತ ಆರೋಪಿಗಳು.
ಆನಂದಪುರದ ನಿವಾಸಿ ಚೌದರಿ ಅವರು ಕುಟುಂಬ ಸಹಿತ ಹೊರ ಹೋಗಿದ್ದಾಗ ಮರಳಿ ಬರುವಷ್ಟರಲ್ಲಿ ಅವರ ಮನೆಯ ಬೀಗ ಒಡೆದು ಕಳ್ಳರು ಒಳನುಗ್ಗಿ ಹಣ, ಆಭರಣ ದೋಚಿ ಪರಾರಿಯಾಗಿದ್ದರು. ಮನೆಯ ಕೊಠಡಿಯ ಬೀರುವಿನಲ್ಲಿದ್ದ 4.90 ಲಕ್ಷ ನಗದು, ಚಿನ್ನಾಭರಣ, ಬೆಳ್ಳಿವಸ್ತುಗಳು ಕಳ್ಳತನವಾಗಿದ್ದವು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರಾಜಸ್ಥಾನಕ್ಕೆ ಹೋಗಿ ಅಲ್ಲಿನ ಜಾನೋರ್ ತಾಲ್ಲೂಕಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇನ್ನಿಬ್ಬರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.