ಚೆನ್ನೈ: ದೇಶದ ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ವಿಧಾನಸಭೆ ಪ್ರತಿಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಜನರನ್ನು ವಿಭಜಿಸುತ್ತದೆ ಎಂದು ಹೇಳಿರುವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಆ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು 2023ರ ಸೆಪ್ಟೆಂಬರ್ನಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳುವ ಮೂಲಕ ತಮ್ಮ ಹಳೆಯ ಅಭಿಪ್ರಾಯವನ್ನು ಪುನರುಚ್ಛರಿಸಿದ್ದಾರೆ.
ಇದೇವೇಳೆ, ನಾಡ ಗೀತೆ ತಮಿಳ್ ತಾಯ್ ವಾಲ್ತುಗೆ ಅಗೌರವ ತೋರಿಸುವ ಯಾವುದೇ ಪ್ರಯತ್ನಕ್ಕೆನಮ್ಮ ಪಕ್ಷ ಅವಕಾಶ ನೀಡುವುದಿಲ್ಲ ಎಂದೂ ಘೋಷಿಸಿದ್ದಾರೆ.
ಉದಯನಿಧಿ ಅವರು 2023ರಲ್ಲಿ ಅವರು ಇಂತಹುದ್ದೇ ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದರು. ನೂತನ ಸರ್ಕಾರದ ಇತ್ತೀಚಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂ, ಜನ ಗಣ ಮನ ಬಳಿಕ ಮೂರನೇ ಸ್ಥಾನದಲ್ಲಿ ನಾಡ ಗೀತೆ ಹಾಡಿದ್ದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಮಿಳು ಸಂಪ್ರದಾಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸರ್ಕಾರ ಖಚಿತಪಡಿಸಬೇಕು. ನಮ್ಮ ಸಂಪ್ರದಾಯ ಮತ್ತು ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರ ಅತ್ಯಂತ ಜಾಗರೂಕವಾಗಿರಬೇಕು ಎಂದು ಸಲಹೆ ನೀಡಿರುವ ಅವರು, 2023ರಲ್ಲಿ ರಾಜ್ಯಪಾಲರು ಶಿಷ್ಟಾಚಾರದಲ್ಲಿ ಬದಲಾವಣೆ ಮಾಡಲು ಮುಂದಾದಾಗ ತಮ್ಮ ಸರ್ಕಾರ ಅವಕಾಶ ನೀಡಲಿಲ್ಲ ಎಂಬುದನ್ನು ಸ್ಮರಿಸಿಕೊಂಡಿದ್ದಾರೆ.