ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರೀ ಬೆಲೆ ಏರಿಕೆ, ತುಷ್ಟೀಕರಣ, ಶಾಸಕ-ಸಚಿವರ ತಲೆ ಎಣಿಕೆಯಲ್ಲೇ ಮುಳುಗಿದೆ. ಸಿಎಂ ತಮ್ಮನೆ ರಿಪೇರಿ ಬಿಟ್ಟು "ಪರ ನಿಂದನೆ"ಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಸುಳ್ಳು ಮತ್ತು ದ್ವೇಷದಿಂದ ಕೂಡಿದೆ" ಎಂದ ಸಿಎಂಗೆ ಖಾರವಾಗಿಯೇ ತಿರುಗೇಟು ನೀಡಿರುವ ಜೋಶಿ, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಮುನ್ನ ಸಿದ್ದರಾಮಯ್ಯ ತಮ್ಮ ಸರ್ಕಾರದ ಅಡಳಿತ ವೈಫಲ್ಯ, ಅಧಿಕಾರಕ್ಕಾಗಿ ಕಿತ್ತಾಟ ಬಗ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
ಜಾಹೀರಾತುಗಳಲ್ಲೇ ಮುನ್ನಲೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಈಗ ಬಯಲಾಗಿದೆ ಎಂದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಒಂದೊಂದಾಗೇ ಪಟ್ಟಿ ಮಾಡಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಗ್ಯಾರೆಂಟಿಗಳ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಶೂಲಕ್ಕೆ ತಳ್ಳಿದೆ. ಅಭಿವೃದ್ಧಿಯನ್ನು ಸಂಪೂರ್ಣ ಶೂನ್ಯವಾಗಿಸಿದೆ. ರಸ್ತೆಗಳೆಲ್ಲಾ ಗುಂಡಿಮಯವಾಗಿವೆ, ಗುತ್ತಿಗೆದಾರರಿಗೆ ಇನ್ನೂ ಬಾಕಿ ಹಣ ಪಾವತಿಸಿಲ್ಲ. ಆದರೆ ಜನಸಾಮಾನ್ಯರಿಗೆ ಮಾತ್ರ ನಿತ್ಯವೂ ಬೆಲೆ ಏರಿಕೆ ಬರೆ ಎಳೆಯುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ಥಿಕ ಅಧೋಗತಿಗೆ ತಳ್ಳಿದ್ದಾರೆ: ಮಾತೆತ್ತಿದರೆ ತಾವೊಬ್ಬ 'ಆರ್ಥಿಕ ತಜ್ಞ' ಎನ್ನುವ ಸಿಎಂ ‘ಕರ್ನಾಟಕದ ಆರ್ಥಿಕತೆಯನ್ನು ಅಧೋಗತಿಗೆ ತಳ್ಳಿದ್ದಾರೆ. ಅಲ್ಲದೆ, ಕುರ್ಚಿ ಕಿತ್ತಾಟದಲ್ಲಿ ಆಡಳಿತವೂ ಹಳಿ ತಪ್ಪಿದೆ. ಸಾಲದ್ದಕ್ಕೆ ಹಾಲು, ಇಂಧನ ಹೀಗೆ 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರಿಗೆ ದ್ರೋಹ ಮಾಡಿದೆ ಎಂದು ಹರಿ ಹಾಯ್ದಿದ್ದಾರೆ.
ಸಿಎಂ ಬೇಜವಾಬ್ದಾರಿ ನಾಯಕತ್ವ:
ಪ್ರಧಾನಿ ಮೋದಿ ಅವರು ದೇಶದ ಹಿತದೃಷ್ಟಿಯಿಂದ ಜನರಿಗೆ ಒಳ್ಳೇ ಸಂದೇಶ ಕೊಟ್ಟರೆ ಸಿಎಂ ಲೇವಡಿ ಮಾಡುತ್ತಿದ್ದು, ಇದು ಅವರ ಬೇಜವಾಬ್ದಾರಿ ನಾಯಕತ್ವವನ್ನು ತೋರಿಸುತ್ತದೆ ಎಂದಿದ್ದಾರೆ ಪ್ರಲ್ಹಾದ ಜೋಶಿ.