ಬಾಗಲಕೋಟೆ: ಅಕ್ರಮ ಮರಳು ಗಣಿಗಾರಿಕೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ 24 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು; ಬಾಗಲಕೋಟೆ ಜಿಲ್ಲೆಯ ಇಲಾಖೆಯ ಉಪ ನಿರ್ದೇಶಕರು; ಬಾಗಲಕೋಟೆ ಜಿಲ್ಲಾಧಿಕಾರಿ; ಮತ್ತು ಬಾದಾಮಿ, ಮುಧೋಳ, ಜಮಖಂಡಿ, ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳ ತಹಶೀಲ್ದಾರ್ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ದಂಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ದೂರುಗಳನ್ನು ದಾಖಲಿಸಲಾಗಿತ್ತು. ಈ ದೂರು ಆಧರಿಸಿ ಹುನಗುಂದ, ಇಳಕಲ್, ಮುಧೋಳ ಹಾಗೂ ಬಾದಾಮಿ ತಾಲ್ಲೂಕುಗಳಲ್ಲಿ ದಾಳಿ ನಡೆದಿದೆ. ಪರಿಸರ ಕಾಯ್ದೆ ಉಲ್ಲಂಘಿಸಿ ಯಂತ್ರೋಪಕರಣಗಳನ್ನು ಬಳಸಿ ನದಿ ದಡದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವುದು ದಾಳಿ ವೇಳೆ ಕಂಡುಬಂದಿದೆ.
65 ಟಿಪ್ಪರ್, 18 ಹಿಟಾಚಿ, 14 ಯಾಂತ್ರೀಕೃತ ದೋಣಿಗಳು, ಆರು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿ ಬಳಸುತ್ತಿರುವುದು ಪತ್ತೆಯಾಗಿದೆ. ಬಾಗಲಕೋಟೆ ಮತ್ತು ನೆರೆಯ ಜಿಲ್ಲೆಗಳ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಅಕ್ರಮವಾಗಿ ಹೊರ ತೆಗೆಯಲಾದ ಮರಳನ್ನು ಹಲವಾರು ಸ್ಥಳಗಳಲ್ಲಿ ಸಂಗ್ರಹಿಸಲಾಗಿದೆ ಮತ್ತು ಬಾರಿ ಪ್ರಮಾಣದಲ್ಲಿ ಮರಳುಗಣಿಗಾರಿಕೆ ನಡೆದಿರುವುದಕ್ಕೆ ಸಾಕ್ಷಯಗಳು ಲಭ್ಯವಾಗಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.