ತಿಪಟೂರು: ತೋಟದಲ್ಲಿ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಅಕ್ರಮವಾಗಿ ಹರಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬರು ದುರ್ಮರಣಕ್ಕೀಡಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾರಗೊಂಡನಹಳ್ಳಿಯಲ್ಲಿ 58 ವರ್ಷದ ಚನ್ನಮ್ಮ ಮೃತಪಟ್ಟ ದುರ್ದೈವಿ. ಮಾರಗೊಂಡನಹಳ್ಳಿ ಗ್ರಾಮದ ರಂಗಸ್ವಾಮಿ ಹಾಗೂ ದಯಾನಂದ ಎಂಬುವವರಿಗೆ ಸೇರಿದ ತೋಟದಲ್ಲಿ ಈ ಘಟನೆ ಸಂಭವಿಸಿದೆ. ಮೂರು ದಿನಗಳ ಹಿಂದೆ ಕೆಲಸಕ್ಕೆಂದು ತೆರಳಿದ್ದ ಚನ್ನಮ್ಮ ಮನೆಗೆ ಮರಳಿರಲಿಲ್ಲ. ಇಂದು ತೋಟದಲ್ಲಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಗ್ರಾಮದಲ್ಲಿ ವಿದ್ಯುತ್ ಶಾಕ್ನಿಂದ ಸಾವು ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ 5 ಜನರು ಈ ಹಿಂದೆ ಇದೇ ರೀತಿ ಅಕ್ರಮ ವಿದ್ಯುತ್ ತಂತಿಗೆ ಬಲಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪದೇ ಪದೇ ಇಂತಹ ಅವಘಡಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.