ಪ್ರೇಮ ಸಂಬಂಧದ ಹಿನ್ನೆಲೆ ಗಂಡನನ್ನೇ ಕೊಲೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸ್ಥಳೀಯರಲ್ಲಿ ಬೆಚ್ಚಿಬೀಳುವಂತೆ ಮಾಡಿದೆ. ಆಗ್ರಾ ಜಿಲ್ಲೆಯ ಸೈಯಾನ್ ಪ್ರದೇಶದಲ್ಲಿ ಅರ್ಧ ಸುಟ್ಟ ಶವ ಪತ್ತೆಯಾದ ಪ್ರಕರಣ ಇದೀಗ ಕೊಲೆ ಪ್ರಕರಣವೆಂದು ದೃಢಪಟ್ಟಿದೆ. ಇನ್ನೂ ಮುಂಗೈ ಮೇಲಿನ ಹಚ್ಚೆಯಿಂದ ಅದು ಲೋಕೇಂದ್ರ ಎಂಬ ವ್ಯಕ್ತಿಯದ್ದೆಂದು ಪೊಲೀಸರು ದೃಢಪಡಿಸಿದರು.
ಪ್ರಕರಣದ ಭೇದನೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಸ್ಥಳದಿಂದ ಮದ್ಯದ ಬಾಟಲಿ ಮತ್ತು ಕಾಗದದ ತುಂಡುಗಳನ್ನು ವಶಪಡಿಸಿಕೊಂಡರು.
ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಮೃತನ ಪತ್ನಿ, ಆಕೆಯ ಪ್ರಿಯಕರ ಮಹೇಶ್ ಪ್ರಜಾಪತಿ ಮತ್ತು ಆತನ ಸ್ನೇಹಿತ ಧರ್ಮವೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯಲ್ಲಿ, ಲೋಕೇಂದ್ರನ ಪತ್ನಿ ಮತ್ತು ಮಹೇಶ್ ನಡುವೆ ಅಕ್ರಮ ಸಂಬಂಧವಿದ್ದದ್ದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿದುಕೊಂಡ ಲೋಕೇಂದ್ರ ತನ್ನ ಪತ್ನಿಯನ್ನು ಗದರಿಸಿದ್ದರಿಂದ, ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು.
ಲೋಕೇಂದ್ರ ಮನೆ ಬಿಟ್ಟ ಬಳಿಕ ಪತ್ನಿ ಮಹೇಶ್ಗೆ ಮಾಹಿತಿ ನೀಡಿದ್ದಳು. ನಂತರ ಮಹೇಶ್ ಮತ್ತು ಧರ್ಮವೀರ್, ಲೋಕೇಂದ್ರನನ್ನು ಹೊಲಕ್ಕೆ ಕರೆದುಕೊಂಡು ಹೋಗಿ, ಮದ್ಯ ಕುಡಿಸಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಬಳಿಕ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.ಈ ಘಟನೆ ಪ್ರೇಮ ಸಂಬಂಧದ ದುರಂತ ಅಂತ್ಯವನ್ನು ತೋರಿಸಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.