ನವದೆಹಲಿ: ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಬಿಟ್ಟು ನಡುವೆ ಇಂದು ಸಂಸತ್ ಭವನದಲ್ಲಿ ಮಾತಿನ ಚಕಮಕಿ ನಡೆಯಿತು. ಸಂಸತ್ ಆವರಣದಲ್ಲಿ ನಿನ್ನೆ ಕಲಾಪದಿಂದ ಅಮಾನತುಗೊಂಡ ಸಂಸದರ ಪ್ರತಿಭಟನೆ ನಡೆಯುತ್ತಿತ್ತು. ಅಲ್ಲಿಗೆ ಆಗಮಿಸಿದ ಸಚಿವ ರವನೀತ್ ಬಿಟ್ಟು ಅವರನ್ನು ರಾಹುಲ್ ಗಾಂಧಿ ದೇಶದ್ರೋಹಿ ಸ್ನೇಹಿತ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ರವನೀತ್ ಬಿಟ್ಟು ಅವರು ಕಾಂಗ್ರೆಸ್ನಿಂದ ಮೂರು ಭಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಯುಪಿಎ ಸರ್ಕಾರದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವರೂ ಆಗಿದ್ದರು. ಆದರೆ 2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಯಾಗಿದ್ದರು.
ಸಂಸತ್ ಭವನದ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸಂಸದರನ್ನು ಯುದ್ಧ ಗೆದ್ದವರಂತೆ ಕುಳಿತಿದ್ದಾರೆ ಎಂದು ಬಿಟ್ಟು ಛೇಡಿಸಿದ್ದರು. ಆಗ ರಾಹುಲ್ ಗಾಂಧಿ ಅವರು ನನ್ನ ದೇಶದ್ರೋಹಿಸ್ನೇಹಿತ ನಡೆದುಕೊಂಡು ಬರುತ್ತಿದ್ದಾನೆ, ಅವನ ನಡಿಗೆಯ ವೇಗ ನೋಡಿ’ ಎಂದು ಹಾಸ್ಯ ಮಾಡಿದರು. ನಂತರ ಹಸ್ತಲಾಘವ ನೀಡಲೂ ಮುಂದಾದರು.
ಆಗ ತಿರುಗೇಟು ನೀಡಿದ ಬಿಟ್ಟು ಅವರು ಕಾಂಗ್ರೆಸ್ ಪಕ್ಷ ದೇಶವನ್ನೇ ಮಾರಿದೆ ಎಂದು ಟೀಕಿಸಿದರು. ಸುಮ್ಮನಿರದ ಕಾಂಗ್ರೆಸ್ ಸಂಸದರು ಬಿಜೆಪಿ ದೇಶವನ್ನೇ ಮಾರಿದೆ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸಚಿವ ನವನೀತ್ ಬಿಟ್ಟು ಅಲ್ಲಿಂದ ಹೊರಟುಹೋದರು.
ಸ್ಪೀಕರ್ ಅವರತ್ತ ಪೇಪರ್ ಗಳನ್ನು ತೂರಿದ್ದಕ್ಕಾಗಿ ಕಾಂಗ್ರೆಸ್ ಸದಸ್ಯರಾದ ಹೈಬಿ ಈಡನ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಗುರ್ಜಿತ್ ಸಿಂಗ್ ಔಜ್ಲಾ, ಪ್ರಶಾಂತ್ ಯಾದರಾವ್ ಪಡೋಲೆ, ಚಾಮಲಾ ಕಿರಣ್ ಕುಮಾರ್ ರೆಡ್ಡಿ ಮತ್ತು ಡೀನ್ ಕುರಿಯಾಕೋಸ್ ಹಾಗೂ ಸಿಪಿಎಂ ಸಂಸದ ಎಸ್ ವೆಂಕಟೇಶನ್ ಅವರನ್ನು ಅಮಾನತು ಮಾಡಲಾಗಿತ್ತು.