ಕಾರವಾರ : ನೀವು ಬಾಯಿ ಮುಚ್ಚಿಕೊಂಡಿದ್ದರೆ ನನಗೆ ಒಳ್ಳೆಯದಾಗುತ್ತದೆ ಎಂದು ಶಾಸಕರಾದ ಇಕ್ಬಾಲ್ ಹುಸೇನ್, ಗಣಿಗ ರವಿಕುಮಾರ್, ಶಿವಗಂಗಾ ಬಸವರಾಜ್ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಾರವಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಡಿಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಮೂವರೂ ಶಾಸಕರು ಸೇರಿದಂತೆ ಹಲವಾರು ಶಾಸಕರು ಅಧಿಕಾರ ಹಸ್ತಾಂತರ ಕುರಿತು ಯಾವುದೇ ಹೇಳಿಕೆ, ಪ್ರತಿಕ್ರಿಯೆ ನೀಡದೆ ಬಾಯಿ ಮುಚ್ಚಿಕೊಂಡಿದ್ದರೆ ಕ್ಷೇಮ. ಇನ್ನಾದರೂ ಬಾಯಿ ಮುಚಿಕೊಂಡಿರಬೇಕು ಎಂದು ವಾರ್ನಿಂಗ್ ನೀಡಿದರು. ವಿದೇಶ ಪ್ರವಾಸಕ್ಕೆ ಹೋಗಿರುವ ಶಾಸಕರೆಲ್ಲಾ ನಮ್ಮವರೇ ಆಗಿದ್ದಾರೆ. ಅವರು ಮರಳಿ ಬಂದ ನಂತರ ಮಾತನಾಡೋಣ ಎಂದರು.
ಕರಾವಳಿ ಪ್ರವಾಸೋದ್ಯಮ ನೀತಿ
ಜಿಲ್ಲೆಯ ಯುವಕರು ಉದ್ಯೋಗ ಅರಸಿ ಗೋವಾ, ಮುಂಬಯಿ ಅಥವಾ ವಿದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು, ಕರಾವಳಿಯ 334 ಕಿ.ಮೀ. ಉದ್ದದ ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಹೊಸ ‘ಕರಾವಳಿ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ವಿಪುಲ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಕಾರ್ಯಗಳೂ ನಿರಂತರವಾಗಿ ಸಾನಡೆಯುತ್ತಿವೆ. ಯಾವ ಕೆಲಸವೂ ನಿಂತಿಲ್ಲ ಎಂದು ಪ್ರಶನೆಯೊಂದಕ್ಕೆ ಉತ್ತರಿಸಿದರು.