ಮುಂಬೈ: ಕ್ರಿಕೆಟ್ ಜಗತ್ತಿನ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ಇಂದು ನೆರವೇರಿತು.
ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ಮುಂಬೈನಲ್ಲಿ ನೆರವೇರಿತು. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಜಿತ್ ಅಗರ್ಕರ್, ರಾಹುಲ್ ದ್ರಾವಿಡ್ ಕಿರಣ್ ಮೋರೆ, ಅನಿಲ್ ಕುಂಬ್ಳೆ, ಅಜಿಂಕ್ಯ ರಹಾನೆ, ಸುರೇಶ್ ರೈನಾ ಮತ್ತು ವೆಂಕಟೇಶ್ ಪ್ರಸಾದ್ ಮೊದಲಾದ ಕ್ರಿಕೆಟ್ ಆಟಗಾರರು ವಿವಾಹಕ್ಕೆ ಸಾಕ್ಷಿಯಾದರು.
ಕ್ರಿಕೆಟ್ ಆಟಗಾರರಷ್ಟೇ ಅಲ್ಲದೆ, ರಾಜಕೀಯ ಮುಖಂಡರು ಮತ್ತು ಚಿತ್ರಲೋಕದ ತಾರೆಯರೂ ಭಾಗಿಯಾಗಿದ್ದರು.
ಕಳೆದ ವರ್ಷ ಆಗಸ್ಟ್ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಮಾರ್ಚ್ 3 ರಂದು ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್ನಲ್ಲಿ ಮೆಹಂದಿ ಸಮಾರಂಭವು ನಡೆದಿತ್ತು. ಆಗಲೂ ಅನೇಕ ಗಣ್ಯರು ಭಾಗವಹಿಸಿದ್ದರು.ಅವರಲ್ಲಿ ರವಿಶಾಸ್ತ್ರಿ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಅಜಿತ್ ಅಗರ್ಕರ್ ಭಾಗವಹಿಸಿದ್ದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್,ಅಮೀರ್ ಖಾನ್ ಸೇರಿದಂತೆ ಅನೇಕ ಗಣ್ಯರು ಹಾಜರಾಗಿದ್ದರು. ಕಳೆದ ಒಂದು ವಾರದಿಂದ ವಿವಿಧ ಕಾರ್ಯಕ್ರಮಗಳು ಜರುಗಿದ್ದವು.
ಇನ್ನು ಸಾನಿಯಾ ಚಾಂದೋಕ್ ಯಾರು ಎಂಬ ಕುತೂಹಲ ನಿಮಗಿರಬಹುದು. ಈಕೆ ಖ್ಯಾತ ಕೈಗಾರಿಕೋದ್ಯಮಿ ರವಿಘಾಯ್ ಅವರ ಮೊಮ್ಮಗಳು. ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.