ನವದೆಹಲಿ: ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಆಗಲಿದೆಯೇ ಇಲ್ಲವೇ ಎಂಬ ಗೊಂದಲಕ್ಕೆ ತೆರೆ ಬಿದ್ದಿಲ್ಲ. ಸಚಿವ ಸಂಪುಟ ವಿಸ್ತರಣೆಯೂ ಕಗ್ಗಂಟಾಗಿ ಪರಿಣಮಿಸಿದೆ. ಡಿಸಿಎಂ ಹುದ್ದೆ ಬೇಡವೇ ಬೇಡ ಎಂದು ಸಿವಕುಮಾರ್ ಪಟ್ಟು ಹಿಡಿದಿದ್ದರೆ ಜಾತಿಗೊಂದು ಡಿಸಿಎಂ ಹುದ್ದೆ ಅನಿವಾರ್ಯ. ಹಾಗಾಗಿ ಲಿಂಗಾಯತ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಡಿಸಿಎಂ ಪೋಸ್ಟ್ ಕೊಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಮೂವರೂ ತಮ್ಮ ಬೆಂಬಲಿಗರೇ ಅಗಿರಬೇಕು ಎನ್ನುವುದು ಅವರ ಮತ್ತೊಂದು ಬೇಡಿಕೆ. ಈ ಮೂಲಕ ಶಿವಕುಮಾರ್ ಅವರನ್ನು ನಿಯಂತ್ರಿಸಬೇಕು ಎನ್ನುವುದು ಅವರ ಗುಪ್ತ ಇಚ್ಛೆ. ಈ ಸಮುದಾಯಗಳಿಗೆ ಅವಕಾಶ ಕಲ್ಪಿಸದೇ ಹೋದಲ್ಲಿ ಮುಂಬರುವ ಚುನಾವಣೆಗಳಲ್ಲಿ ಅಗುವ ಅನಾಹುತಗಳಿಗೆ ತಾವು ಹೊಣೆಯಲ್ಲ ಎನ್ನುವುದು ಅವರ ಮತ್ತೊಂದು ಬಾಂಬ್!
ಗೊಂದಲ ಮುಂದುವರೆದಿದೆ. ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಕೈಗೆ ಪ್ರತ್ಯೇಕ ಪಟ್ಟಿ ನೀಡಿದ್ದಾರೆ. ಜತೆಗೆ ವರಿಷ್ಠರ ಮೂಲಕವೂ ಲಾಬಿ ಮಾಡುತ್ತಿರುವ ಶಾಸಕರೂ ಇದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೂ ತಮ್ಮ ನಿಷ್ಠಾವಂತರನ್ನು ಸೇರ್ಪಡೆ ಮಾಡಲು ಕಸರತ್ತು ನಡೆಸುತ್ತಿದ್ದಾರೆ.
ನಾಳೆ ಸಂಜೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಮುಖಂಡರೆಲ್ಲರೂ ಹಲವು ಸುತತಿನ ಮಾತುಕತೆ ನಡೆಸಿದ್ದರೂ ಪಟ್ಟಿ ಅಂತಿಮವಾಗಿಲ್ಲ. ಮತ್ತೊಂದು ಕಡೆ ರಾಹುಲ್ ಗಾಂಧಿ ಯುವಕರಿಗೆ ಆದ್ಯತೆ ನೀಡಲು ಹಿರಿಯ ತಲೆಗಳಿಗೆ ಕೊಕ್ ನೀಡಲು ಅದೇಶಿಸಿದ್ದಾರೆ. ಕೇರಳದಲ್ಲಿ ಈ ಪ್ರಯೋಗದಲ್ಲಿ ಸಫಲರಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಕನಿಷ್ಠ 15 ಮಂದಿ ಸಚಿವರು ಹೊರಗುಳಿಯಬೇಕಾಗುತ್ತದೆ. ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕಳುಹಿಸಬೇಕು ಎನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶಾರ್ಟ್ ಲಿಸ್ಟ್ ಮಾಡಿದ ನಂತರ ಎಲ್ಲರ ಪಟ್ಟಿಯನ್ನು ಪರಿಶೀಲಿಸಿ ರಾಹುಲ್ ಗಾಂಧಿ ಮುದ್ರೆ ಒತ್ತಲಿದ್ದಾರೆ.
ಸತೀಶ್ ಜಾರಕಿಹೊಳಿ: ಡಾ. ಜಿ. ಪರಮೇಶ್ವರ: ಯು.ಟಿ. ಖಾದರ್: ಪ್ರಿಯಾಂಕ್ ಖರ್ಗೆ: ರಾಮಲಿಂಗ ರೆಡ್ಡಿ;ಎಂ.ಬಿ. ಪಾಟೀಲ್: ಕೃಷ್ಣ ಭೈರೇಗೌಡ: ಕೆ.ಜೆ. ಜಾರ್ಜ್: ಈಶ್ವರ್ ಖಂಡ್ರೆ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಎಲ್ಲ ಸ್ಥಾನಗಳನ್ನು ಒಟ್ಟಿಗೆ ಭರ್ತಿ ಮಾಡುವ ಮೊದಲು ಆರಂಭದಲ್ಲಿ 10-12 ಸಚಿವರ ಪ್ರಮಾಣ ವಚನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ನಂತರ ಹಂತಹಂತವಾಗಿ ಭರ್ತಿ ಮಾಡುವುದು ಈವರೆಗೆ ನಡೆದುಕೊಂಡು ಬಂದ ವಾಡಿಕೆ. ಈಗಲೂ ಅದೇ ಸಂಪ್ರದಾಯಕ್ಕೆ ಅಂಟಿಕೊಳ್ಳಲಾಗುತ್ತದೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮತ್ತೆ ವಿಧಾನಸಭೆ ಚುನಾವಣೆ ಎದುರಾಗಲಿದೆ. ಆದ್ದರಿಂದ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.