ಬೆಂಗಳೂರು: RSS ಪಥಸಂಚಲನಗಳಲ್ಲಿ ದೊಣ್ಣೆ, ಕತ್ತಿ, ತ್ರಿಶೂಲ ಪ್ರದರ್ಶನ ನಡೆದಾಗ ಬಿಜೆಪಿ ಪಕ್ಷಕ್ಕೆ ಅದು "ಶಿಸ್ತಿನ ಪರಂಪರೆ"ಯಂತೆ ಕಾಣುತ್ತದೆ. ಬೀದಿ ಬೀದಿಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಮಾತುಗಳನ್ನಾಡಿ, ಗಲಭೆಗಳಿಗೆ ಪ್ರಚೋದನೆ ನೀಡಿ ಅದರ ಲಾಭ ಪಡೆದು ರಾಜಕೀಯ ನಡೆಸುವ ಬಿಜೆಪಿ ಪಕ್ಷಕ್ಕೆ ಕಾನೂನಿನ ಬಗ್ಗೆ ಮಾತಾಡಲು ಕಿಂಚಿತ್ತಾದರೂ ನೈತಿಕತೆ ಇದೆಯೇ ಎಂದು ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿಯ ರಾಜಕೀಯವೇ ಭಯದ ಪ್ರಚೋದನೆಯ ಕಾರ್ಖಾನೆ. ಮೊದಲು ಸಮಾಜದಲ್ಲಿ ಭಯ ಹುಟ್ಟಿಸುವುದು, ನಂತರ ಆ ಭಯದ ಪ್ರತಿಕ್ರಿಯೆಯನ್ನೇ ‘ಅಪರಾಧ’ ಎಂದು ತೋರಿಸುವುದು ಹಳೆಯ ತಂತ್ರವಲ್ಲವೇ? ಸಾಮರಸ್ಯದ ಸಮಾಜಕ್ಕೆ ಬೆಂಕಿ ಹಂಚುವ ಬಿಜೆಪಿ ಪಕ್ಷದಿಂದ ನಕಲಿ ನೀತಿ ಪಾಠ ಹೇಳಿಸಿಕೊಳ್ಳುವ ದಾರಿದ್ರ್ಯ ನನಗೆ ಬಂದಿಲ್ಲ.
ಮಸೀದಿಗಳ ಮುಂದೆ ಧರ್ಮ-ದ್ವೇಷದ ಘೋಷಣೆ ಕೂಗಿದವರು ಯಾರು? ಧರ್ಮದ ಹೆಸರಿನಲ್ಲಿ ಬೀದಿಗಳನ್ನು ರಣರಂಗ ಮಾಡಿದವರು ಯಾರು? ಪ್ರತಿ ಚುನಾವಣೆಯನ್ನೂ ಹಿಂದೂ-ಮುಸ್ಲಿಂ ವಿಷಯದ ಮೇಲೆ ಗೆಲ್ಲಲು ಯತ್ನಿಸಿದವರು ಯಾರು?
ಸಂಘಪರಿವಾರದವರ ಕೈಯಲ್ಲಿ ದೊಣ್ಣೆ ಇದ್ದರೆ "ಸಂಸ್ಕೃತಿ" ಅದುವೇ "ರಾಷ್ಟ್ರಸೇವೆ". ಬೇರೆಯವರು ಆತಂಕ ವ್ಯಕ್ತಪಡಿಸಿದರೆ ‘ಅಶಾಂತಿ’ಯೇ? ಬಿಜೆಪಿಯ ರಾಜಕೀಯವೇ ಪ್ರಚೋದನೆ, ಧ್ರುವೀಕರಣ ಮತ್ತು ದ್ವೇಷದ ಮೇಲೆಯೇ ನಿಂತಿರುವಾಗ ಈ ನೆಲದ ಶಾಂತಿ, ಸೌಹಾರ್ದತೆ, ಸಹೋದರತೆಯ ತತ್ವ ಅಪಥ್ಯವಾಗುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.