2026-06-08 01:20:33

ಗೃಹಲಕ್ಷ್ಮಿಯೋಜನೆಯ ರೂ.5,000 ಕೋಟ ಹಣ ಏನಾಯ್ತು? ಲೆಕ್ಕ ಕೊಡಿ ಸಿದ್ದರಾಮಣ್ಣ!: ನಿಖಿಲ್‌ ಕುಮಾರಸ್ವಾಮಿ| Speed News Kannada

ಗೃಹಲಕ್ಷ್ಮಿಯೋಜನೆಯ ರೂ.5,000 ಕೋಟ ಹಣ ಏನಾಯ್ತು? ಲೆಕ್ಕ ಕೊಡಿ ಸಿದ್ದರಾಮಣ್ಣ!: ನಿಖಿಲ್‌ ಕುಮಾರಸ್ವಾಮಿ| Speed News Kannada

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸುವವರೆಗೆ ಹೋರಾಟ ನಡೆಸುವುದಾಗಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇವತ್ತು ರಾಜ್ಯದ ಬಡ ತಾಯಂದಿರ ಹಕ್ಕಿನ ಹಣಕ್ಕೇ ಕನ್ನ ಹಾಕಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಇಡೀ ರಾಜ್ಯದ ಗೃಹಲಕ್ಷ್ಮಿಯರಿಗಾಗಿ ಬಜೆಟ್‌ನಲ್ಲಿ ಒಟ್ಟು ರೂ.28,608.40 ಕೋಟಿ ಬೃಹತ್ ಅನುದಾನವನ್ನು ಕಾಯ್ದಿರಿಸಲಾಗಿತ್ತು. ಆದರೆ, ಈ ಸರ್ಕಾರ ಇಡೀ ವರ್ಷದಲ್ಲಿ ಕೇವಲ 10 ಕಂತುಗಳನ್ನು (₹23,608.40 Crores) ಮಾತ್ರ ವಿತರಿಸಿದೆ.

ಆರ್ಥಿಕ ವರ್ಷದ ಕೊನೆಯ ಫೆಬ್ರವರಿ ಮತ್ತು ಮಾರ್ಚ್ 2025ರ 2 ಕಂತುಗಳ ಹಣ ಫಲಾನುಭವಿಗಳಿಗೆ ತಲುಪಿಯೇ ಇಲ್ಲ. ಬಡ ತಾಯಂದಿರ ಹೊಟ್ಟೆಗೆ ಹೊಡೆದು, ಮಹಿಳೆಯರ ಕಲ್ಯಾಣ ನಿಧಿಯನ್ನೇ ಲೂಟಿ ಮಾಡಿ ಬರೋಬ್ಬರಿ ರೂ.5,000 Crores ಹಣವನ್ನು ನಾಪತ್ತೆ ಮಾಡಲಾಗಿದೆ! ಇದು ಕೇವಲ ತಾಂತ್ರಿಕ ಲೋಪವಲ್ಲ, ಇಡೀ ರಾಜ್ಯದ ಇತಿಹಾಸದಲ್ಲೇ ಗ್ಯಾರಂಟಿ ಹೆಸರಿನಲ್ಲಿ ನಡೆದ ಅತ್ಯಂತ ದೊಡ್ಡ ಆರ್ಥಿಕ ಹಗರಣ ಮತ್ತು ಪ್ರಾಮಾಣಿಕ ತೆರಿಗೆದಾರರ ಹಣಕ್ಕೆ ಎಸಗಿದ ದ್ರೋಹವಾಗಿದೆ.

ವಿಧಾನಸಭೆಯಲ್ಲೇ ಇಲಾಖಾ ಸಚಿವರು, "Finance Department ನಮಗೆ ಸಕಾಲದಲ್ಲಿ ರೊಕ್ಕ ಬಿಡುಗಡೆ ಮಾಡದ ಕಾರಣ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಪಾವತಿಯಾಗಿಲ್ಲ" ಎಂದು ಅಧಿಕೃತವಾಗಿ ಒಪ್ಪಿಕೊಂಡು ಇಡೀ ರಾಜ್ಯದ ಕ್ಷಮೆಯಾಚಿಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳ ನೇರ ಅಧೀನದಲ್ಲಿರುವ ಆರ್ಥಿಕ ಇಲಾಖೆಯೇ ತನ್ನದೇ ಇಲಾಖೆಗೆ ಹಣ ನೀಡದಷ್ಟು ಈ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ!

ಈ ಮಹಾ ವಂಚನೆ ಮತ್ತು ಲೂಟಿಯ ವಿರುದ್ಧ ಈಗ ಮಾನ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL Writ Petition No. 15928/2026) ದಾಖಲಾಗಿದೆ. ಘಟನೆ ನಡೆದು ಒಂದು ವರ್ಷಕ್ಕೂ ಅಧಿಕ ಕಾಲ ಕಳೆದಿದ್ದರೂ ಇಂದಿಗೂ ಆ ₹5,000 Crores ಹಣ ಎಲ್ಲಿದೆ, ಅದನ್ನು ಯಾವ ರಾಜಕೀಯ ಲಾಭಕ್ಕೆ ಅಥವಾ ಚುನಾವಣಾ ಫಂಡಿಂಗ್‌ಗೆ ಡೈವರ್ಟ್ ಮಾಡಲಾಗಿದೆ ಎನ್ನುವ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿಲ್ಲ!

ಬಡ ತಾಯಂದಿರ ಹಕ್ಕಿನ ಆ ₹5,000 Crores ಹಣದ ಪೈಸೆ ಪೈಸೆ ಲೆಕ್ಕ ಸಿಗುವವರೆಗೂ ಮತ್ತು ತಾಯಂದಿರ ಖಾತೆಗೆ ಬಾಕಿ ಹಣ ಜಮೆಯಾಗುವವರೆಗೂ ನಮ್ಮ ರಾಜಕೀಯ ಹೋರಾಟ ವಿಶ್ರಮಿಸುವುದಿಲ್ಲ ಎಂದು ನಿಖಿಲ್‌ ಹೇಳಿದ್ದಾರೆ.
 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.