ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ ಸುಮಾರು 4,097 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಸುಮಾರು 3,240 ಕಿ.ಮೀ.ಗೆ ಈಗಾಗಲೇ ಬೇಲಿ ಹಾಕಲಾಗಿದೆ. ಈ ಹಿಂದೆ ಭೂಮಿ ಹಸ್ತಾಂತರದಲ್ಲಿ ಉಂಟಾಗಿದ್ದ ವಿಳಂಬದಿಂದಾಗಿ ಬೇಲಿ ನಿರ್ಮಾಣ ಕಾರ್ಯ ಬಾಕಿ ಉಳಿದಿತ್ತು. ಪಶ್ಚಿಮ ಬಂಗಾಳದ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 127 ಕಿಲೋಮೀಟರ್ಗಳಷ್ಟು ಭಾಗದಲ್ಲಿ ಇನ್ನೂ ತಂತಿ ಬೇಲಿ ನಿರ್ಮಾಣವಾಗಿರಲಿಲ್ಲ.
ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಈ ಭಾಗವು ಮುಕ್ತವಾಗಿಯೇ ಉಳಿದಿತ್ತು, ಇದರಿಂದ ಬಾಂಗ್ಲಾ ನುಸುಳುಕೋರರು ಸುಲಭವಾಗಿ ಪ್ರವೇಶ ಪಡೆಯುತ್ತಿದ್ದರು. 105 ಎಕರೆ ಭೂಮಿ ಹಸ್ತಾಂತರವಾದರೆ 127 ಕಿ.ಮೀ ವ್ಯಾಪ್ತಿಯಲ್ಲಿ ಬೇಲಿ ನಿರ್ಮಿಸಲು ಸಾಧ್ಯವಾಗುತ್ತದೆ.
ಭೂಮಿ ನೀಡಲು ಒಲ್ಲೆ ಎಂದಿದ್ದ ಮಮತಾ:
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಬಿಎಸ್ಎಫ್ಗೆ ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರವು ಬಿಎಸ್ಎಫ್ನ ಅಧಿಕಾರ ವ್ಯಾಪ್ತಿಯನ್ನು ಗಡಿಯಿಂದ 15 ಕಿ.ಮೀ ನಿಂದ 50 ಕಿ.ಮೀ ವರೆಗೆ ಹೆಚ್ಚಿಸಿದ್ದರಿಂದ ಕೆರಳಿದ್ದ ಮಮತಾ ಬ್ಯಾನರ್ಜಿ “ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ” ಎಂದು ಟೀಕಿಸಿದ್ದರು. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದು, ಬಿಎಸ್ಎಫ್ ವ್ಯಾಪ್ತಿ ಹೆಚ್ಚಳದಿಂದ ರಾಜ್ಯ ಪೊಲೀಸರ ಅಧಿಕಾರ ಮೊಟಕಾಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಗಡಿ ಭಾಗದ ಜನರನ್ನು ಬಿಎಸ್ಎಫ್ ಅಧಿಕಾರಿಗಳು ಪೀಡಿಸುತ್ತಿದ್ದಾರೆ ಮತ್ತು ಮತ ಚಲಾಯಿಸದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದೂ ಅವರು ಆಗಾಗ್ಗೆ ಆರೋಪ ಮಾಡುತ್ತಲೇ ಬಂದಿದ್ದರು.