ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಿಶಾಲ್ ಶ್ರೀವಾಸ್ತವ, ರಾಜ್ ಸಿಂಗ್ ಮತ್ತು ಮಾಯಾಂಕ್ ಬಂಧಿತ ಆರೋಪಿಗಳು. ಇವರು ಉತ್ತರ ಪ್ರದೇಶ ಮತ್ತು ಬಿಹಾರ ಮೂಲದವರು ಎನ್ನಲಾಗಿದೆ.
ಕೋಲ್ಕತ್ತಾ ನಗರದ ಹೊರವಲಯದಲ್ಲಿರುವ ಟೋಲ್ ಬೂತ್ನಲ್ಲಿ ಯುಪಿಐ ಪಾವತಿ ಮಾಡಿರುವ ವಿಡಿಯೋ ಆಧರಿಸಿ ಇವರನ್ನು ಬಂಧಿಸಲಾಗಿದೆ.
ಅಪರಾಧದ ಮೊದಲು ಮತ್ತು ನಂತರ ಶಂಕಿತರು ಮಾಡಿದ ಡಿಜಿಟಲ್ ಪಾವತಿಯನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳ ಚಲನವಲನಗಳನ್ನು ಗುರುತಿಸಲು, ಪೊಲೀಸರು ಟೋಲ್ ಪ್ಲಾಜಾದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಕಾರನ್ನು ಪತ್ತೆ ಹಚ್ಚಿದ್ದಾರೆ.
ಫಲಿತಾಂಶ ಪ್ರಕಟವಾದ ಎರಡು ದಿನ ನಂತರ ಬುಧವಾರ ರಾತ್ರಿ ರಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬೈಕ್ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ದುಷ್ಕರ್ಮಿಗಳು ರಥ್ ಮುಂಭಾಗದ ಆಸನದಲ್ಲಿ ಕುಳಿತಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಹಂತಕರಿಗೆ ಇತ್ತು. ಇದು ಪೂರ್ವಯೋಜಿತ ಹತ್ಯೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದರು.
ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಭಾಗಿಯಾಗಿದ್ದು, ಗುಂಡು ಹಾರಿಸಿದ ಶಾರ್ಪ್ ಶೂಟರ್ ಗಳನ್ನು ಹೊರರಾಜ್ಯದಿಂದ ಕರೆತರಲಾಗಿದೆ ಎಂಬ ಅನುಮಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಎರಡು ತಂಡಗಳನ್ನು ಕಳುಹಿಸಲಾಗಿತ್ತು.
ಅಪರಾಧಕ್ಕೆ ಬಳಸಲಾದ ಸಿಲ್ವರ್ ಬಣ್ಣದ ನಿಸ್ಸಾನ್ ಮೈಕ್ರಾ ಮತ್ತು ಎರಡು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.